ಸೇಡಂ (ಕಲಬುರಗಿ): ಬಿಜೆಪಿಗೆ 400 ಸೀಟ್ ಈ ಸಲ ಸಿಕ್ಕರೆ ಸಂವಿಧಾನವನ್ನು ಬದಲಾಯಿಸುತ್ತಾರೆ. ಅವರ ಸಂವಿಧಾನದಿಂದ ಸಮಾಜದ ಎಲ್ಲ ವರ್ಗದವರಿಗೆ ಸಮಾನ ಅವಕಾಶ ಹಾಗೂ ಹಕ್ಕು ಸಿಗುತ್ತದೆ. ಆದರೆ ಸಂವಿಧಾನ ಬದಲಾದರೆ ಎಲ್ಲ ಅವಕಾಶಗಳು ಕಳೆದು ಹೋಗಲಿವೆ. ಕೋಲಿ ಸಮಾಜವನ್ನು ಎಸ್ಟಿ ಸೇರಿಸಲು ರಾಜ್ಯ ಸರ್ಕಾರ ಕಳಿಸಿದ ಪ್ರಸ್ತಾವನೆಯನ್ನು ಮೋದಿ ಸರ್ಕಾರ ತಿರಸ್ಕಾರ ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಹೇಳಿದರು.
ಸೇಡಂನಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ಒಲಿಂಪಿಕ್ಸ್ ಆಟಗಾರರ ಮೇಲೆ ಕಿರುಕುಳವಾಗಿತ್ತು, ಮಹಿಳೆಯ ಮೇಲೆ ಅತ್ಯಾಚಾರವಾಗಿತ್ತು. ಆಗ ಮೋದಿ ಸುಮ್ಮನೆ ಇದ್ದರು. ಮೋದಿ ಜತೆ ಇರುವ ವ್ಯಕ್ತಿ ಇಂದು ಕರ್ನಾಟಕದಲ್ಲಿ ಸಾವಿರಾರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಅದೆ ವ್ಯಕ್ತಿಯ ಪರ ಮತಯಾಚಿಸಿದ್ದಾರೆ. ಮೋದಿ ಹಾಗೂ ಅಮಿತ್ ಶಾ ಉತ್ತರಿಸಲಿ. ಅದೇ ವ್ಯಕ್ತಿ ಯಾರಿಗೂ ಗೊತ್ತಾಗದಂತೆ ವಿದೇಶಕ್ಕೆ ಪರಾರಿಯಾದ. ಮಂಗಲ ಸೂತ್ರದ ಬಗ್ಗೆ ಮಾತನಾಡುವ ಮೋದಿ ಈಗ ಏನು ಹೇಳುತ್ತಾರೆ? ಈ ದೇಶದಲ್ಲಿ ಬಹಳಷ್ಟು ಪ್ರದಾನಿಗಳು ಆಗಿ ಹೋಗಿದ್ದಾರೆ. ಅವರೆಲ್ಲ ಸತ್ಯದ ಹಾದಿಯಲ್ಲಿ ನಡೆದಿದ್ದಾರೆ. ಆದರೆ ಮೋದಿ ಅವರು ಮಹಿಳೆಯರ ರಕ್ಷಣೆ ಏನು ಮಾಡಿದ್ದಾರೆ ಹೇಳಲಿ ಎಂದರು.