ಬೆಳಗಾವಿ: ಮೂರು ವಾರಗಳಿಂದ ಅರಣ್ಯ ಇಲಾಖೆಯ ನುರಿತ ಸಿಬ್ಬಂದಿ ಹಾಗೂ ಪರಿಣತರ ಕಾರ್ಯತಂತ್ರಗಳಿಗೆ ಸೊಪ್ಪು ಹಾಕದ ಚಿರತೆ ಅನಾಯಾಸವಾಗಿ ಗಾಲ್ಫ್ ಮೈದಾನದಲ್ಲಿ ಸುಳಿದಾಡುತ್ತಿದೆ. ಇತ್ತ ಭಾನುವಾರ ರಜಾ ದಿನವಾಗಿದ್ದರಿಂದ ಕೆಲ ಮಹಿಳೆಯರು ಚಿರತೆ ಶೋಧಿಸುವುದಾಗಿ, ಕೋಲು ಹಿಡಿದು ಗಾಲ್ಫ್ ಮೈದಾನದ ಗೇಟ್ ಹತ್ತಿ, ಒಳನುಗ್ಗಲು ಯತ್ನಿಸಿ ಹುಚ್ಚಾಟ ಮೆರೆದಿದ್ದಾರೆ.
ತವರು ಜಿಲ್ಲೆಯಲ್ಲೇ ಇಷ್ಟೆಲ್ಲ ಆದರೂ ಅರಣ್ಯ ಸಚಿವ ಉಮೇಶ ಕತ್ತಿ ಗಾಲ್ಫ್ ಮೈದಾನಕ್ಕೆ ಕನಿಷ್ಠ ಭೇಟಿಯನ್ನೂ ನೀಡದ ನಡೆ ಖಂಡಿಸಿ, ಸ್ಥಳಿಯ ಕಾಂಗ್ರೆಸ್ ಕಾರ್ಯಕರ್ತೆಯರು ಕಾರ್ಯಾಚರಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು. ಗಾಲ್ಫ್ ಮೈದಾನದ ಗೇಟ್ ಹತ್ತಿ ಅಸಮಾಧಾನ ವ್ಯಕ್ತಪಡಿಸಿದರು. ಚಿರತೆ ನಮ್ಮ ಮೇಲೆ ದಾಳಿದ ಮಾಡಿದ ಬಳಿಕವಾದರೂ, ಅದನ್ನು ಹಿಡಿದು ಬೆಳಗಾವಿಗರ ಆತಂಕ ದೂರ ಮಾಡಲಿ ಎಂದು ಪ್ರತಿಭಟನಾನಿರತ ಮಹಿಳೆಯರು ಒತ್ತಾಯಿಸಿದರು. ಗುಲ್ಜಾರ್ ಶೇಖ್, ಸವಿತಾ ಕೋಬ್ರೆ, ಸಾರಾ ಜತ್ತಿ, ಅರ್ಚನಾ, ತಬಸುಮ್ ಮುಲ್ಲಾ ಸೇರಿ 10 ಮಹಿಳಾ ಕಾರ್ಯಕರ್ತೆಯರು ಇದ್ದರು.
ಜನರ ನಿದ್ದೆಗೆಡಿಸಿರುವ ಆಪರೇಷನ್ ಚಿರತೆ 25ನೇ ದಿನಕ್ಕೆ ಕಾಲಿಟ್ಟಿದ್ದು, ಚಾಲಾಕಿ ಚಿರತೆ ಅರಣ್ಯ ಇಲಾಖೆ ಹಾಗೂ ಪರಿಣತರ ಯಾವುದೇ ತಂತ್ರಕ್ಕೂ ಜಗ್ಗದೇ ಓಡಾಡಿಕೊಂಡಿದೆ. ಅಹಿತಕರ ಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗಾಲ್ಫ್ ಗ್ರೌಂಡ್ ಸುತ್ತಲಿನ 22 ಪ್ರಾಥಮಿಕ ಮತ್ತು ಶಾಲೆಗಳಿಗೆ ರಜೆ ೂಷಿಸಲಾಗಿದೆ.
ಮುಂದುವರಿದ ಕಾರ್ಯಾಚರಣೆ: ಭಾನುವಾರವೂ ಕಾರ್ಯಾಚರಣೆ ನಡೆಸಲಾಯಿತು. ರಜಾ ದಿನವಾಗಿದ್ದರಿಂದ 80 ಜನ ಸಿಬ್ಬಂದಿಯನ್ನು ಮಾತ್ರ ಚಿರತೆಯ
ಚಲನವಲನದ ಮೇಲೆ ನಿಗಾ ಇಡಲು ನಿಯೋಜಿಸಲಾಗಿದೆ. ಮಚಾನುಗಳ ಮೇಲಿನಿಂದಲು ಕಣ್ಗಾವಲು ಇಟ್ಟು, 8 ಸ್ಥಳಗಳಲ್ಲಿ ಬೋನುಗಳನ್ನಿಟ್ಟು ಸೆರೆಗೆ ಜಾಲ ಬೀಸಲಾಗಿದ್ದು, ಈ ಪ್ರದೇಶದಲ್ಲಿ ವಾಹನ ಸಂಚಾರ ರ್ನಿಬಂಧಿಸಲಾಗಿದೆ. ಭಾನುವಾರ ರಾತ್ರಿಯೂ ಬೋನಿಗೆ ಬೀಳದಿದ್ದರೆ ಕಾರ್ಯಾಚರಣೆ ಸೋಮವಾರವೂ ಮುಂದುವರಿಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತಿಂಗಳು ಸಮೀಪಿಸುತ್ತಿದ್ದರೂ ಫಲ ಸಿಗದ ಕಾರ್ಯಾಚರಣೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದು, ಚಿರತೆ ಹೆಸರಿನಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೀಸಾ ಎಲ್ಲವೂ ಸಿದ್ಧಪಡಿಸಿ ಕಾಲೆಳೆಯುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನ ಎರಡು ಆನೆ, ಹುಕ್ಕೇರಿಯ ಹಂದಿ ಹಿಡಿಯುವ ತಂಡ, ಎಚ್ಇಆರ್ಎಫ್ ರೆಸ್ಕೂ ತಂಡ ಹಾಗೂ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ನುರಿತ ಪರಿಣತರನ್ನೊಳಗೊಂಡ 300ಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ನಿರೀಕ್ಷಿತ ಫಲ ಸಿಗುತ್ತಿಲ್ಲ.
ಎರಡ್ಮೂರು ದಿನಕ್ಕೊಮ್ಮೆ ಕಾಣಿಸಿಕೊಳ್ಳುತ್ತಿರುವ ಚಿರತೆಯು ಸಮೀಪದಲ್ಲೇ ಭೇಟೆಯಾಡಿ, ಆಹಾರ ಸೇವಿಸಿರುವ ಕುರುಹುಗಳು ಪತ್ತೆಯಾಗುತ್ತಲೇ ಇವೆ.
ಅರಿವಳಿಕೆ ಚುಚ್ಚುಮದ್ದು ನೀಡಲು ಕಾಯುತ್ತಿರುವ ಶಾರ್ಪ್ ಶೂಟರ್ಗಳಿಗೂ ಚಿರತೆ ಸೆರೆ ಸವಾಲಾಗಿರುವುದು, ಅರಣ್ಯ ಇಲಾಖೆಗೆ ದೊಡ್ಡ ತಲೆಬಿಸಿ ತಂದಿದೆ.