More

    ಸುರ್ಜೆವಾಲ್​ಗೆ ಏನು ಗೊತ್ತಿದೆ?

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಕಾಂಗ್ರೆಸ್ಸಿನ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲ ಅವರಿಗೆ ಕರ್ನಾಟಕದ ಬಗ್ಗೆ ಏನು ಗೊತ್ತಿದೆ? ಅವರು ಕಾಂಗ್ರೆಸ್ಸಿನ ಒಳಜಗಳವನ್ನು ಮೊದಲು ಸರಿಪಡಿಸಲಿ. ಆ ಮೇಲೆ ಕರ್ನಾಟಕದ ಬಗ್ಗೆ ಮಾತನಾಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಛೇಡಿಸಿದರು.

    ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದಿಂದ ನರಕ ಸೃಷ್ಟಿಯಾಗಿದೆ ಎಂದಿರುವ ಸುರ್ಜೆವಾಲಾ ಅವರ ಹೇಳಿಕೆಗೆ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸೃಷ್ಟಿಸಿದ್ದ ನರಕದಿಂದಲೇ ಅವರನ್ನು ಮನೆಗೆ ಜನರು ಕಳುಹಿಸಿದ್ದಾರೆ. ಅತ್ಯಂತ ಬೇಜವಾಬ್ದಾರಿ ವಿರೋಧ ಪಕ್ಷವಿದು. ಜನರಿಗೆ ನಮ್ಮ ವೈಫಲ್ಯಗಳನ್ನು ತೋರಿಸುವ ಬದಲು ಈ ರೀತಿಯ ಮಾತುಗಳಿಂದ ಜನರ ಮೇಲೆ ಪ್ರಭಾವ ಬೀರಲು ಹೊರಟಿದ್ದಾರೆ. ಇದು ಸಾಧ್ಯವಿಲ್ಲ ಎಂದರು.

    ಅಸುರರು ಯಾರು? ದೇವತೆಗಳು ಯಾರು ? ಎಂದು ಜನರಿಗೆ ಗೊತ್ತಿದೆ. 70 ವರ್ಷ ಆಡಳಿತ ಮಾಡಿರುವ ಕಾಂಗ್ರೆಸ್ ಕಿತ್ತೊಗೆದು ಅಸುರರು ಯಾರೆಂದು ತೋರಿಸಿದ್ದಾರೆ. ಕಾಂಗ್ರೆಸ್​ನಲ್ಲಿರುವ ಅಸುರರ ದೊಡ್ಡ ಪಟ್ಟಿಯೇ ಇದೆ ಎಂದರು.

    ಕಾಂಗ್ರೆಸ್​ನವರಿಗೂ ನಮಗೂ ಬಹಳ ವ್ಯತ್ಯಾವಿದೆ. ಅವರು ಚುನಾವಣೆಗಾಗಿ ಆಕಾಶವನ್ನು ತೋರಿಸಿ ಜನರನ್ನು ಮರಳು ಮಾಡುವ ಪ್ರಯತ್ನ ಮಾಡಿದ್ದಾರೆ. ನಾವು ಯಾವುದಕ್ಕಾಗಿ, ಯಾರಿಗೆ, ಎಷ್ಟು ಹಣವಾಗುತ್ತದೆ ಎಂದು ವಿವರಿಸಿದ್ದೇವೆ. ಅವರು ನಮ್ಮನ್ನು ನಕಲು ಮಾಡಿದ್ದಾರೆ. ನಾವು ಗೃಹಿಣಿ ಶಕ್ತಿ ನೀಡಿದ ಮೇಲೆ ಗೃಹಲಕ್ಷ್ಮೀ ಯೋಜನೆ ಘೊಷಿಸಿದ್ದಾರೆ. ಆದ್ದರಿಂದ ಸುರ್ಜೆವಾಲಾ ಅವರಿಗೆ ನೆನಪಿನ ಶಕ್ತಿ ಕಡಿಮೆಯಾಗಿದೆ ಎಂದು ಟೀಕಿಸಿದರು.

    ಕಳೆದ ಬಾರಿ ಆಯವ್ಯಯ ಅನುಷ್ಠಾನಕ್ಕೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಶೇ. 90 ರಷ್ಟು ಆದೇಶಗಳನ್ನು ಹೊರಡಿಸಲಾಗಿದೆ. ಅದೇ ರೀತಿ ಈ ಬಾರಿಯೂ ಕೂಡ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಅನುಷ್ಠಾನ ಸಮಿತಿ ರಚಿಸಿ, ಬಜೆಟ್ ಅನುಷ್ಠಾನ ಮಾಡಲಾಗುವುದು ಎಂದರು.

    ಶಾಶ್ವತ ಹೂವಿರಲಿದೆ: ವಿರೋಧ ಪಕ್ಷದವರು ಕಿವಿ ಮೇಲೆ ಹೂವಿಟ್ಟುಕೊಳ್ಳುವ ಅಭಿಯಾನ ಆರಂಭಿಸಿರುವ ಬಗ್ಗೆ ಉತ್ತರಿಸಿದ ಬೊಮ್ಮಾಯಿ, ಇಷ್ಟು ದಿನ ಜನರ ಕಿವಿ ಮೇಲೆ ಹೂವಿಟ್ಟಿದ್ದು, ಇನ್ಮುಂದೆ ಜನರು ನಿಮ್ಮ ಕಿವಿ ಮೇಲೆ ಹೂವಿಡುತ್ತಾರೆ ಎಂದು ವಿಧಾನಸಭೆಯಲ್ಲಿಯೇ ಉತ್ತರಿಸಿದ್ದೇನೆ. ಶಾಶ್ವತವಾಗಿ ಅವರ ಕಿವಿಗಳ ಮೇಲೆ ಹೂವಿರಲಿದೆ. ಚುನಾವಣೆಯಾದ ನಂತರವೂ ಅವರ ಕಿವಿ ಮೇಲೆ ಹೂವಿರಲಿದೆ ಎಂದು ವ್ಯಂಗ್ಯವಾಡಿದರು.

    ಬಣ್ಣ ಬದಲಾಯಿಸುವ ವ್ಯಕ್ತಿ: ವಿರೋಧ ಪಕ್ಷದವರು ಒಗ್ಗೂಡಿದರೆ ಬಿಜೆಪಿಯನ್ನು ಸೋಲಿಸಬುಹುದು ಎಂದಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿಕೆಗೆ ಉತ್ತರಿಸಿದ ಬೊಮ್ಮಾಯಿ, ನಿತೇಶಕುಮಾರ್ ಅವರು ಎಷ್ಟು ಸಲ ಬಣ್ಣ ಬದಲಾಯಿಸಿದ್ದಾರೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಬಣ್ಣ ಬದಲಾಯಿಸುವ ವ್ಯಕ್ತಿಯ ಮಾತಿಗೆ ಏನು ಉತ್ತರ ನೀಡಲು ಸಾಧ್ಯ ಎಂದು ಕುಟುಕಿದರು.

    ಮಹದಾಯಿ ಅನುಷ್ಠಾನ ವಿಚಾರವಾಗಿ ಕಾದು ನೋಡಿ. ಮಹದಾಯಿ ಅಂತಿಮ ಹಂತದಲ್ಲಿದೆ. ಕಾಂಗ್ರೆಸ್ ಗೆ ಪರ್ಮನೆಂಟ್ ಹೂವನ್ನು ಜನರು ಇಡುತ್ತಾರೆ. ಚುನಾವಣೆ ಆದ ಮೇಲೂ ಕಾಂಗ್ರೆಸ್ ಕಿವಿ ಮೇಲೆ ಹೂವು ಇಟ್ಟುಕೊಳ್ಳಲಿದ್ದಾರೆ ಎಂದು ಛೇಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts