ಕಾರವಾರ: ಬೈತಖೋಲ್ನಲ್ಲಿ ಸರ್ವೆ ಕಾರ್ಯ ನಡೆಸಿದ್ದ ಮೀನುಗಾರಿಕೆ ಬೋಟ್ನ್ನು ಸ್ಥಳೀಯ ಮೀನುಗಾರರು ಹಿಡಿದಿಟ್ಟ ಘಟನೆ ಶುಕ್ರವಾರ ನಡೆದಿದೆ.
ಅಂಕೋಲಾ ನೋಂದಣಿ ಸಂಖ್ಯೆ ಹೊಂದಿದ ಶಾಂತಾದುರ್ಗಾ ಹೆಸರಿನ ಔಟ್ ಬೋರ್ಡ್ ಇಂಜಿನ್ನ ಟ್ರಾಲರ್ ಬೋಟ್ನಲ್ಲಿ ಬಂದ ನಾಲ್ವರು ಬೈತಖೋಲ್ನಲ್ಲಿ ಅಲೆಗಳ ಎತ್ತರ ಹಾಗೂ ಇನ್ನಿತರ ಸರ್ವೆ ಕಾರ್ಯ ನಡೆಸಿದ್ದರು ಎನ್ನಲಾಗಿದೆ.
ಸಾಗರ ಮಾಲಾ ಯೋಜನೆಯಲ್ಲಿ ನಿರ್ವಣವಾಗಲಿರುವ ಬಂದರುಗಳ ಸಂಬಂಧ ಸಿಡಬ್ಲ್ಯುಪಿಆರ್ಎಸ್ ಎಂಬ ಕಂಪನಿ ಸರ್ವೆ ಕಾರ್ಯದ ಜವಾಬ್ದಾರಿ ಪಡೆದಿದೆ. ಅದರಿಂದ ಉಪ ಗುತ್ತಿಗೆ ಪಡೆದ ಜಿಯೋ ಸರ್ವೀಸ್ ಪ್ರೖೆ. ಲಿ. ಎಂಬ ಕಂಪನಿಯ ಸಿಬ್ಬಂದಿ ಮೀನುಗಾರಿಕೆ ಬೋಟ್ನಲ್ಲಿ ಸರ್ವೆ ಕಾರ್ಯಕ್ಕೆ ಮುಂದಾಗಿದ್ದರು. ಅನುಮತಿ ಇಲ್ಲದೆ ಸರ್ವೆ ಕಾರ್ಯಕ್ಕೆ ಮುಂದಾದ ಹಿನ್ನೆಲೆಯಲ್ಲಿ ಮೀನುಗಾರರು ಅದನ್ನು ವಶಕ್ಕೆ ಪಡೆದರು. ಈ ಕುರಿತು ಪ್ರತಿಕ್ರಿಯಿಸಿದ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ನಾಗರಾಜ್, ‘ಮೀನುಗಾರಿಕೆ ಬೋಟ್ನಲ್ಲಿ ಜನರನ್ನು ಸಾಗಿಸುವುದು ಅಥವಾ ಸರ್ವೆ ಕಾರ್ಯ ನಡೆಸಲು ಅವಕಾಶವಿಲ್ಲ. ಬೈತಖೋಲ್ನಲ್ಲಿ ಅನ್ಯಕಾರ್ಯಕ್ಕೆ ಬೋಟ್ ಬಳಸುತ್ತಿರುವ ಕುರಿತು ನಮಗೆ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಆ ಬೋಟ್ ಮಾಲೀಕರ ವಿರುದ್ಧ ಕಾನೂನು ಕ್ರಮಕ್ಕೆ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೊದಲ ಬಾರಿ ಎಚ್ಚರಿಕೆ ನೀಡಲಾಗುವುದು. ನಂತರ ದಂಡ ವಿಧಿಸಲಾಗುವುದು’ ಎಂದರು.