More

    ಸರ್ವಜ್ಞ ಜ್ಞಾನ ಸಂಗ್ರಹದ ಪಿತಾಮಹ: ಡಾ. ಶಶಿಧರ್ ಬಣ್ಣನೆ

    ಶಿವಮೊಗ್ಗ: ಇಡೀ ದೇಶ ಸುತ್ತಿ ಜ್ಞಾನ ಸಂಪಾದಿಸಿ, ತ್ರಿಪದಿಗಳ ಮೂಲಕ ಅದರ ಸಾರವನ್ನು ಜಗತ್ತಿಗೆ ಸಾರಿದ ಸರ್ವಜ್ಞ ಸಾಂಪ್ರದಾಯಿಕ ಜ್ಞಾನ ಸಂಗ್ರಹದ ಪಿತಾಮಹ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ. ಕೆ.ಸಿ.ಶಶಿಧರ್ ಬಣ್ಣಿಸಿದರು.
    ಕುವೆಂಪು ರಂಗಮಂದಿರದಲ್ಲಿ ಸೋಮವಾರ ಜಿಲ್ಲಾ ಕುಂಬಾರರ ಸಂಘದ ಆಶ್ರಯದಲ್ಲಿ ಶ್ರೀ ಸರ್ವಜ್ಞ ಜಯಂತ್ಯುತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿ, ಲೋಕ ಸಂಚಾರ ಮಾಡಿ ಅಗಾಧ ಮಾಹಿತಿ, ಜ್ಞಾನ ಸಂಗ್ರಹಿಸಿ ಅದನ್ನು ಅರ್ಥ ಮಾಡಿಕೊಂಡು ತಮ್ಮ ತ್ರಿಪದಿಗಳಲ್ಲಿ ನೀಡಿರುವ ಸರ್ವಜ್ಞರ ವಚನಗಳನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಹಾಗೂ ಸಂಶೋಧನೆಗೆ ಒಳಪಡಿಸುವ ಅಗತ್ಯವಿದೆ. ಅವರನ್ನು ಒಂದು ಜಾತಿಗೆ ಸೀಮಿತಗೊಳಿಸದೇ ಅವರ ಕೆಲಸಗಳನ್ನು ಗುರುತಿಸುವ ಮತ್ತು ವಿಶಾಲವಾಗಿ ಅರ್ಥೈಸಬೇಕು ಎಂದರು.
    ಚುರುಕು ಬುದ್ಧಿಯುಳ್ಳ, ಸರಳತೆಯಿಂದ ಕೂಡಿದ, ಅಹಂ ಹಾಗೂ ಹಂಗಿಲ್ಲದ ಅವರು ಸ್ವತಂತ್ರ ವಿಚಾರಗಳಿಗೆ ಮಾರು ಹೋಗಿ ವಿಶ್ವ ಮಾನವ ತತ್ವವನ್ನು ಪ್ರತಿಪಾದಿಸಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸರ್ವಜ್ಞರು ಬರೆಯದ ಚೇತನವಿಲ್ಲ. 7,70,770 ತ್ರಿಪದಿ ರಚಿಸಿದ್ದಾರೆಂದು ಅವರ ತ್ರಿಪದಿಯೇ ಹೇಳುತ್ತದೆ. ಆದರೆ ನಮಗೆ ಶೇ.2ರಷ್ಟೂ ಲಭಿಸಿಲ್ಲ. ಅವರ ತ್ರಿಪದಿಗಳು ಮಾಹಿತಿಗಳ ಆಗರ. ಒಂದೊಂದು ತ್ರಿಪದಿಯನ್ನು ಒಂದೊಂದು ದಿನ ವಿಶ್ಲೇಷಿಸಬಹುದು ಎಂದು ಹೇಳಿದರು.
    ಅಂತಹ ತ್ರಿಪದಿಗಳು ಸಂಶೋಧನೆಗೆ ಒಳಗಾಗಬೇಕು. ಅವರ ತ್ರಿಪದಿಗಳಲ್ಲಿ ಅತ್ಯಂತ ವೈಜ್ಞಾನಿಕ ಅಂಶಗಳನ್ನು ಗುರುತಿಸಬಹುದು. ವಚನಗಳನ್ನು ವೈಜ್ಞಾನಿಕವಾಗಿ ಸಂಶೋಧನೆಗೊಳಪಡಿಸುವ, ಅಧ್ಯಯನ ನಡೆಸುವ ಅವಶ್ಯಕತೆ ಇದೆ. ಆರೋಗ್ಯ, ಆಹಾರ, ಮಳೆ, ಬೆಳೆ, ಅರ್ಥವ್ಯವಸ್ಥೆ ಸೇರಿದಂತೆ ಸಮಗ್ರ ಕ್ಷೇತ್ರಗಳ ಕುರಿತು ಅವರು ವಚನಗಳನ್ನು ರಚಿಸಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಮುಂದಿನ ಪೀಳಿಗೆಗೆ ವಚನಗಳ ಜ್ಞಾನವನ್ನು ಹಂಚುವ ಅಗತ್ಯವಿದೆ ಎಂದರು.
    ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಬಿ.ಸಿ.ಲೋಕಪ್ಪ ಬೊಂಬಳಗಿ, ತಾಲೂಕು ಅಧ್ಯಕ್ಷ ಎಸ್.ಮಣಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts