ಚಿತ್ರದುರ್ಗ: ಸಮಾಜಕ್ಕಾಗಿ ದುಡಿಯುವವರು, ಒಳಿತು ಬಯಸುವವರು ಸದಾ ಆದರ್ಶರಾಗಿರುತ್ತಾರೆ. ಹಂತ-ಹಂತವಾಗಿ ಉನ್ನತ ಸ್ಥಾನಕ್ಕೂ ತಲುಪುತ್ತಾರೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಓ.ಪರಮೇಶ್ವರಪ್ಪ ಹೇಳಿದರು.
ಪತ್ರಿಕಾ ಭವನದಲ್ಲಿ ಬುಧವಾರ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ನಿಂದ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಾನವ ಅತ್ಯಂತ ಬುದ್ಧಿಯುಳ್ಳ ಜೀವಿ. ಸತ್ಯಾಸತ್ಯತೆ ತಿಳಿಯಲು ಯೋಚಿಸುವ ಶಕ್ತಿ ಹೊಂದಿದ್ದಾನೆ. ಆದ್ದರಿಂದ ಉತ್ತಮ ಚಿಂತನೆಗಳು ಯಾರಲ್ಲಿ ಮೂಡುತ್ತದೋ ಅದು ಅವರ ಬದುಕಿಗೆ ದಾರಿದೀಪವೂ ಆಗಲಿದೆ ಎಂದು ಸಲಹೆ ನೀಡಿದರು.
ಎಲ್ಲರಲ್ಲೂ ಒಂದಿಲ್ಲೊಂದು ಸಾಮರ್ಥ್ಯವಿದ್ದು, ಹೊರತೆಗೆಯಲು ಪ್ರಯತ್ನಿಸಬೇಕು. ಸ್ವಾರ್ಥಕ್ಕಾಗಿ ಬದುಕದೇ ದೇಶ ಮತ್ತು ಸಮಾಜಕ್ಕಾಗಿ ಶ್ರಮಿಸಿದಾಗ ಗೌರವವೂ ತನ್ನಿಂತಾನೇ ಸಿಗಲಿದೆ ಎಂದರು.
ವಾಹನ ಚಲಾಯಿಸುವ ವೇಳೆ ನಿಯಮ ಪಾಲಿಸದಿರುವುದು, ಮೊಬೈಲ್ನಲ್ಲಿ ಮಾತನಾಡುತ್ತ ಸಾಗುವ ಕಾರಣ ಅಪಘಾತಗಳು ದಿನೇ ದಿನೆ ಹೆಚ್ಚುತ್ತಿವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಟ್ರಸ್ಟ್ ನಿರಂತರ ಜಾಗೃತಿಗೆ ಮುಂದಾಗಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.
ಇದೇ ವೇಳೆ ಪತ್ರಕರ್ತ ಎಂ.ಎನ್.ಅಹೋಬಲಪತಿ, ಉದ್ಯಮಿ ಅರುಣ್ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ತಿಪ್ಪೇಸ್ವಾಮಿ, ಪ್ರಾಧ್ಯಾಪಕ ಲೇಪಾಕ್ಷಿ, ಡಾ.ಸೌಮ್ಯಾ ಮಂಜುನಾಥ, ಎನ್ಎಸ್ಯುಐ ಜಿಲ್ಲಾಧ್ಯಕ್ಷ ವಿನಯ್ ಗೋಡೆಮನೆ, ನಾಗರಾಜ್, ಬಸವರಾಜ್, ರಂಗಸ್ವಾಮಿ ಇತರರಿದ್ದರು.