ದಾವಣಗೆರೆ: ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ-ಸಾಮಾಜಿಕ ನ್ಯಾಯಕ್ಕಾಗಿ ಸಂಘಟನೆ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.
ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಡೊಳ್ಳು ಬಾರಿಸುವ ಮೂಲಕ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿಯ ಪಿ.ಬಿ.ರಸ್ತೆಯಲ್ಲಿ ಮಾನವ ಸರಪಳಿ ರಚಿಸಿದರು. ನಂತರ ಡಿಸಿ ಶಿವಾನಂದ ಕಾಪಶಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಒಳಮೀಸಲು ಸಂಬಂಧ ಸದಾಶಿವ ಆಯೋಗ ವರದಿ ಸಲ್ಲಿಸಿ ವರ್ಷಗಳೇ ಕಳೆದರೂ ರಾಜ್ಯ ಸರ್ಕಾರ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡದೆ ಕಾಲಹರಣ ಮಾಡುತ್ತಿದೆ. ಕೂಡಲೆ ಈ ಬಗ್ಗೆ ಗಮನ ಹರಿಸಿ ಪರಿಶಿಷ್ಟರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಬೇಡ ಜಂಗಮರ ಹೆಸರಲ್ಲಿ ನಕಲಿ ಪ್ರಮಾಣಪತ್ರ ನೀಡಬಾರದು. ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಹೆಚ್ಚಿಸಬೇಕು. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಡಾ.ಅಂಬೇಡ್ಕರ್ ಹೆಸರಿಡಬೇಕು. ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಡಿ ದರ್ಜೆ ಹೊರ ಗುತ್ತಿಗೆ ನೌಕರರ ವೇತನ ಏರಿಸಬೇಕೆಂದು ಆಗ್ರಹಿಸಿದರು.
ಸಮಿತಿಯ ಜಿಲ್ಲಾಧ್ಯಕ್ಷ ಎಸ್.ಅಡಿವೆಪ್ಪ, ಜಿ.ಸತ್ಯಪ್ಪ, ಸೋಮಲಾಪುರ ಹನುಮಂತಪ್ಪ, ರಾಕೇಶ್ಕುಮಾರ್, ಎಸ್.ಆರ್.ಶಶಿಧರ್ ಪುಟಗನಾಳ್, ಎಚ್.ಸಿ. ಸಿದ್ದೇಶ್ ಬಾತಿ, ನಾಗರಾಜ ನಿಟುವಳ್ಳಿ, ಎಚ್.ಮಂಜುನಾಥ ಹಳೇಕುಂದುವಾಡ, ಮೈಲಪ್ಪ ಹರಿಹರ, ರೇವಣಸಿದ್ದಪ್ಪ, ಪವಿತ್ರಾ ಕಾಡಜ್ಜಿ, ಚಂದ್ರಮ್ಮ, ಶಕೀಲಾ ಬೇಗಂ ಚಿಕ್ಕನಹಳ್ಳಿ, ಸುಧಾ ಕಾಡಜ್ಜಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
—