ಸಾಗರ: ಹಿಂದು ಪದದ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ. ಈ ಕೂಡಲೇ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಮಂಗಳವಾರ ಬಿಜೆಪಿ ನಗರ ಘಟಕ ಮತ್ತು ಯುವ ಮೋರ್ಚಾ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, ಯಾವುದೇ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಹಿಂದು ಶಬ್ದ ಅಸಭ್ಯ ಮತ್ತು ಅಶ್ಲೀಲ ಎಂದು ಜಾರಕಿಹೊಳಿ ಹೇಳಿದ್ದಾರೆ. ಈ ರೀತಿಯ ಅನರ್ಥವನ್ನು ಹೇಳಿದ ನಿಘಂಟು ಯಾವುದು ಎನ್ನುವುದನ್ನು ಸತೀಶ್ ಜಾರಕಿಹೊಳಿ ಬಹಿರಂಗ ಪಡಿಸಬೇಕು. ಜಾರಕಿಹೊಳಿ ಹೇಳಿಕೆಯಿಂದ ಕಾಂಗ್ರೆಸ್ ಸಂಸ್ಕೃತಿ ಏನು ಎನ್ನುವುದು ಜಗಜ್ಜಾಹೀರವಾಗಿದೆ. ಸತೀಶ್ ಹೇಳಿಕೆಯನ್ನು ಸಮಸ್ತ ಹಿಂದುಗಳು ಒಕ್ಕೊರಲಿನಿಂದ ಖಂಡಿಸಬೇಕು ಎಂದರು.
ನಗರಸಭೆ ಉಪಾಧ್ಯಕ್ಷ ವಿ.ಮಹೇಶ್ ಮಾತನಾಡಿ, ಹಿಂದು ಸಂಸ್ಕೃತಿಯನ್ನು ಇಷ್ಟು ವರ್ಷಗಳ ಕಾಲ ಅನುಸರಿಸಿ, ಈಗ ಅದೇ ಧರ್ಮದ ಅವಹೇಳನೆ ಮಾಡಿರುವುದು ಜಾರಕಿಹೊಳಿ ಸಣ್ಣತನಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇದ್ದರೆ ತಕ್ಷಣ ಸತೀಶ್ ಜಾರಕಿಹೊಳಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಿ ಎಂದು ಆಗ್ರಹಿಸಿದರು.