ಮೈಸೂರು : ಸಣ್ಣಪುಟ್ಟ ಸಮುದಾಯಗಳು ಒಗ್ಗಟ್ಟು ಪ್ರದರ್ಶಿಸಿದಲ್ಲಿ ಮಾತ್ರ ಅಭಿವೃದ್ಧಿ ಹೊಂದಬಹುದು ಎಂದು ಶಾಸಕ ಎಚ್.ಪಿ.ಮಂಜುನಾಥ್ ಅಭಿಪ್ರಾಯಪಟ್ಟರು.
ಹುಣಸೂರು ನಗರದ ನಡುಬೀದಿಯಲ್ಲಿರುವ ಶ್ರೀ ಕೋಲನೂರು ಮಾರಿಯಮ್ಮ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿ ಸ್ಥಳೀಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸೂಕ್ಷ್ಮಾತಿಸೂಕ್ಷ್ಮ ಸಮುದಾಯಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ನಿಮ್ಮಲ್ಲಿರಬಹುದಾದ ವ್ಯತ್ಯಾಸಗಳನ್ನು ಬದಿಗಿಟ್ಟು ಒಂದಾಗಿ ಹೋರಾಡುವ ಛಲವಿದ್ದರೆ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ತಾಲೂಕಿನಲ್ಲಿ ಜನರ ಭಾವನಾತ್ಮಕ ಭಾವನೆಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಹಿಂದಿನಿಂದಲೂ ದೇವಾಲಯಗಳ ಅಭಿವೃದ್ಧಿಗೆ ಆರ್ಥಿಕ ಸಹಕಾರ ನೀಡಲಾಗುತ್ತಿದ್ದು, ಮುಂದೆಯೂ ಈ ಕಾರ್ಯ ಮುಂದುವರಿಯಲಿದೆ ಎಂದರು.
ಸ್ಥಳೀಯರ ಒತ್ತಾಸೆಯ ಮೇರೆಗೆ ಕೋಲನೂರು ಮಾರಿಯಮ್ಮ ದೇವಾಲಯದ ರಾಜಗೋಪುರ ಮತ್ತು ಅಶ್ವತ್ಥಕಟ್ಟೆ ಅಭಿವೃದ್ಧಿಗೆ ತಾಯಿ ಹೆಸರಿನಲ್ಲಿ 5 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿ ಒಂದು ಲಕ್ಷ ರೂ. ಮುಂಗಡ ನೀಡಿದರು. ಅಲ್ಲದೆ ಶಾಸಕರ ಅನುದಾನದಡಿ 5 ಲಕ್ಷ ರೂ.ಅನುದಾನ ಒದಗಿಸುವುದಾಗಿಯೂ ಭರವಸೆ ನೀಡಿದರು.