ಶಿಕಾರಿಪುರ: ಸಂಗೀತ ಗಂಧರ್ವ ವಿದ್ಯೆ. ಜಾತಿ, ಮತ, ಪಂಥ, ಧರ್ಮಗಳ ಕಟ್ಟಳೆಯಿಲ್ಲ. ಅದು ಸರ್ವವ್ಯಾಪಿ ಎಂದು ಪುರಸಭೆ ಅಧ್ಯಕ್ಷೆ ರೇಖಾಬಾಯಿ ಮಂಜುಸಿಂಗ್ ಹೇಳಿದರು.
ರಾಘವೇಂದ್ರ ಬಡಾವಣೆಯ ಶ್ರೀ ವಿನಾಯಕ ಸೇವಾ ಸಮಿತಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಮಾರಿಕಾಂಬಾ ಬಯಲು ರಂಗಮಂದಿರದಲ್ಲಿ ಮೊದಲ ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದು ನಿರೀಕ್ಷೆ ಮೀರಿ ಜನರು ಸೇರಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ ಮಾತನಾಡಿ, ಧಾರ್ಮಿಕ ಕಾರ್ಯಗಳು ನಮ್ಮಲ್ಲಿನ ಸಂಕುಚಿತ ಮನೋಭಾವ ದೂರ ಮಾಡುತ್ತವೆ. ಕಳೆದ 38 ವರ್ಷಗಳಿಂದ ನಿರಂತರವಾಗಿ ವಿನಾಯಕ ಸೇವಾ ಸಮಿತಿಯವರು ಶ್ರೀ ಗಣೇಶೋತ್ಸವ ನಡೆಸಿಕೊಂಡು ಬರುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕರೊನಾ ಕಾರಣದಿಂದ ಕಳೆಗುಂದಿದ್ದ ಕಾರ್ಯಕ್ರಮ ಇಂದು ಅದ್ದೂರಿಯಾಗಿ ನಡೆಯುತ್ತಿದೆ. ನಾಡಿನ ಬೇರೆ ಬೇರೆ ಕಡೆಗಳಿಂದ ಕಲಾವಿದರು ಶಿಕಾರಿಪುರಕ್ಕೆ ಆಗಮಿಸಿ ಸಂಗೀತದ ರಸದೌತಣ ನೀಡುತ್ತಿದ್ದಾರೆ ಎಂದು ಹೇಳಿದರು.