ಹೊಸನಗರ: ಸಾಗರ ಭಾಗದಿಂದ ಹೊಸನಗರದ ಕೆ.ಬಿ.ಸರ್ಕಲ್ ಕಡೆ ಗುರá-ವಾರ ಬೆಳಗ್ಗೆ ಹೊರಟಿದ್ದ ಹಸಿರುಮಕ್ಕಿ ಲಾಂಚ್, ಗಾಳಿ ಮಳೆಗೆ ಸಿಲುಕಿ ಶರಾವತಿ ಹಿನ್ನೀರ ಮಧ್ಯೆಯೇ ಗಂಟೆಗಟ್ಟಲೇ ಸ್ಥಗಿತಗೊಂಡು ಆತಂಕಕ್ಕೆ ಕಾರಣವಾಗಿತ್ತು.
ಸಾಗರ ತಾಲೂಕಿನ ಹುಲಿದೇವರಬನದಿಂದ ಹೊರಟ ಲಾಂಚ್ ಹಿನ್ನೀರ ಮಧ್ಯಭಾಗಕ್ಕೆ ಬರುತ್ತಿದ್ದಂತೆ ವಿಪರೀತವಾಗಿ ಬರುತ್ತಿದ್ದ ಮಳೆ ಮತ್ತು ಬೀಸುತ್ತಿದ್ದ ಗಾಳಿಗೆ ಚಾಲಕನ ನಿಯಂತ್ರಣ ತಪ್ಪಿದೆ. ಕೊನೆಗೆ ನಿರ್ಮಾಣ ಹಂತದ ಸೇತುವೆಯ ಫಿಲ್ಲರ್ಗೆ ತಾಗಿ ಅಲ್ಲೇ ಸ್ಥಗಿತಗೊಂಡಿದೆ. ಇದರಿಂದ ಲಾಂಚ್ನಲ್ಲಿದ್ದ ಸುಮಾರು 25ಕ್ಕೂ ಹೆಚ್ಚು ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು. ಜತೆಗೆ ಕಾರು, ಬೈಕ್ಗಳಿದ್ದವು.
ಚಾಲಕನ ಕಾರ್ಯಕ್ಷಮತೆ: ನಿಯಂತ್ರಣ ತಪ್ಪಿದ ಮೇಲೂ ಧೃತಿಗೆಡದ ಚಾಲಕ ರವಿ, ಸಿಬ್ಬಂದಿ ಸಿದ್ದರಾಜು ಇತರರು ಕೆಲಹೊತ್ತು ಕಾದು ನಿಧಾನವಾಗಿ ಲಾಂಚ್ಅನ್ನು ತೆಗೆಯುವ ಮೂಲಕ ಕೆ.ಬಿ.ಸರ್ಕಲ್ ದಡ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಶರಾವತಿ ಹಿನ್ನೀರ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ವಿಪರೀತ ಗಾಳಿ ಕೂಡ ಬೀಸುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ 80 ಸಾವಿರ ಕ್ಯೂಸೆಕ್ಗಿಂತಲೂ ಅಧಿಕ ನೀರು ಹರಿಯುತ್ತಿದ್ದು ತೀವ್ರತೆ ಹೆಚ್ಚಿತ್ತು. ಲಾಂಚ್ ಹಿನ್ನೀರಿನ ಮಧ್ಯದಲ್ಲಿ ಸ್ಥಗಿತಗೊಂಡು ಪ್ರಯಾಣಿಕರು ಜೀವವನ್ನು ಕೈಯಲ್ಲಿ ಹಿಡಿದು ಕೂರುವ ಸ್ಥಿತಿ ನಿರ್ವಣವಾಗಿತ್ತು. ಲಾಂಚ್ ಸ್ಥಗಿತಗೊಂಡ ವಿಷಯ ತಿಳಿಯುತ್ತಿದ್ದಂತೆ ಪ್ರಯಾಣಿಕರನ್ನು ದಡ ಸೇರಿಸಲು ಬೋಟ್ಗಳನ್ನು ಸಿದ್ಧಪಡಿಸುವ ಪ್ರಯತ್ನ ನಡೆದಿರುವ ವೇಳೆಗೆ ಚಾಲಕರು ಯಾವುದೇ ಆತುರಕ್ಕೆ ಅವಕಾಶ ನೀಡದೆ ನಿಧಾನವಾಗಿ ಲಾಂಚ್ನ್ನು ದಡ ಸೇರಿಸುವಲ್ಲಿ ಯಶಸ್ವಿಯಾದರು. ಈ ಮಧ್ಯೆ ಅಧಿಕಾರಿಗಳು ಬೋಟ್ ಬಳಸಿ ಪ್ರಯಾಣಿಕರನ್ನು ಕರೆ ತರಲು ಸಿದ್ಧತೆ ನಡೆಸಿದ್ದರು. ಸ್ಥಳಕ್ಕೆ ಸಾಗರ ಪೊಲೀಸರು ಕೂಡ ಆಗಮಿಸಿ ಘಟನೆಯನ್ನು ಪರಿಶೀಲಿಸಿದರು.
ಸತತವಾಗಿ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ಮೊಬೈಲ್ ಸಂಪರ್ಕ ಅವ್ಯವಸ್ತಗೊಂಡಿದ್ದು ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ. ಇದು ಇನ್ನಷ್ಟು ಆತಂಕಕ್ಕೆ ಕೂಡ ಕಾರಣವಾಗಿತ್ತು.