ಬೆಳಗಾವಿ: ಅರ್ಹ ಎಲ್ಲ ಕಾರ್ಮಿಕರಿಗೂ ವಿವಿಧ ಸೌಲಭ್ಯ ವಿತರಿಸಬೇಕು ಎಂದು ಆಗ್ರಹಿಸಿದ ವಕೀಲ ಎನ್.ಆರ್.ಲಾತೂರ್ ನೇತೃತ್ವದಲ್ಲಿ ಕಾರ್ಮಿಕರು ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾದ್ಯಂತ 2 ಲಕ್ಷಕ್ಕೂ ಅಧಿಕ ನೋಂದಾಯಿತ ಕಟ್ಟಡ ಕಾರ್ಮಿಕರು ಇದ್ದಾರೆ. ವಿವಿಧ ಯೋಜನೆ ಬೆರಳೆಣಿಕೆ ಕಾರ್ಮಿಕರಿಗಷ್ಟೇ ತಲುಪುತ್ತಿದ್ದು, ಗೌಂಡಿ ಕಿಟ್, ಸೇಂಟ್ರಿಂಗ್ ಕಿಟ್, ಪ್ಲಂಬಿಂಗ್ ಕಿಟ್, ಸ್ಕೂಲ್ಕಿಟ್ ಸೇರಿ ವಿವಿಧ ಸೌಲಭ್ಯವನ್ನು ಎಲ್ಲ ಕಾರ್ಮಿಕರಿಗೂ ವಿತರಿಸಬೇಕು ಎಂದು ಮನವಿ ಮಾಡಿದರು. ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ವಿತರಿಸುವ ವಿವಿಧ ಕಿಟ್ ಹಾಗೂ ಲ್ಯಾಪ್ಟಾಪ್ಗಳಿಗೆ ತಗಲುವ ವೆಚ್ಚವನ್ನು ಕಾರ್ಮಿಕರ ಖಾತೆಗೆ ವರ್ಗ ಮಾಡಬೇಕು. ಸೌಲಭ್ಯಗಳ ಕುರಿತು ಪ್ರಚಾರ ಮಾಡಬೇಕು. ಕಾರ್ಮಿಕ ಸೇವಾ ಕೇಂದ್ರಗಳನ್ನು ಪ್ರತಿ ಗ್ರಾಪಂನಲ್ಲಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರ ಮಕ್ಕಳ ಬಾಕಿ ವಿದ್ಯಾರ್ಥಿ ವೇತನ ಬಿಡುಗಡೆ ಮಾಡುವ ಜತೆಗೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಸಿದ ಬಗ್ಗೆ ಪೂರ್ಣ ಮಾಹಿತಿ ಪತ್ರಿಗಳನ್ನು ಜಾಹೀರಾತು ನೀಡಬೇಕು. ಕಾರ್ಮಿಕರ ಮೊದಲೆರಡು ಮಕ್ಕಳಿಗೆ ಮಾತ್ರ ವಿದ್ಯಾರ್ಥಿ ವೇತನ ಎನ್ನುವ ನಿಯಮ ಬದಲಾಯಿಸಿ ಯಾವುದೇ ಎರಡು ಮಕ್ಕಳಿಗೆ ಎಂದು ಬದಲಾಯಿಸಬೇಕು, ನಿವೇಶನ ಖರೀದಿ ಮತ್ತು ಮನೆ ಕಟ್ಟಲು 5 ಲಕ್ಷ ರೂ. ಸಹಾಯ ಧನ ನೀಡಬೇಕು ಹಾಗೂ ನೋಂದಣಿ, ನವೀಕರಣ, ಸೌಲಭ್ಯ ವಿತರಣೆ ಸರಳೀಕೃತಗೊಳಿಸಲು ಪ್ರತಿ ತಾಲೂಕಿಗೆ ಒಬ್ಬಕಾರ್ಮಿಕ ನಿರೀಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಶಿವಾಜಿ ಕಾಗಣಿಕರ್, ಸಂಗೀತಾ ಚೌಗಲೆ, ಪಿ.ಕೆ.ಅಧೋನಿ, ಜಿ.ಬಿ.ಅಣವೇಕರ್, ಮಹೇಶ ಹೊನಗೆ ಹಾಗೂ ಅರುಣ ಟಾಕರೆ ಸೇರಿ ಇತರರಿದ್ದರು.