ನಿಪ್ಪಾಣಿ: ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಪ್ರಮಾಣ ಪತ್ರದಲ್ಲಿ ಹೆಸರು ಬದಲಾಯಿ ಸಲು 5 ಸಾವಿರ ರೂ. ಲಂಚ ಪಡೆಯುತ್ತಿದ್ದ ಸ್ಥಳೀಯ ಉಪತಹಸೀಲ್ದಾರ್ ಅಭಿಷೇಕ ಬೊಂಗಾಳೆ ಮತ್ತು ಭೂ ದಾಖಲೆ ವಿಭಾಗದ ಕಂಪ್ಯೂಟರ್ ಆಪರೇಟರ್ ಪರೇಶ ಸತ್ತಿ ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಗಳತಗಾದ ರತ್ನವ್ವ ಕೂಗೆ ಎಂಬುವರು ನ್ಯಾಯಾಲ ಯಕ್ಕೆ ಹಾಜರುಪಡಿಸಲಿರುವ ಪ್ರಮಾಣಪತ್ರದಲ್ಲಿ ಹೆಸರು ಬದಲಾಯಿಸುವಂತೆ ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಮಹಿಳೆ ಪದೇ ಪದೆ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದರೂ ನಿರ್ಲಕ್ಷಿಸಿದ್ದರು. ಪ್ರಮಾಣಪತ್ರದಲ್ಲಿ ಹೆಸರು ಬದಲಾಯಿಸಲು ಕಂಪ್ಯೂಟರ್ ಆಪರೇಟರ್ ಮಹಿಳೆ ಬಳಿ ಐದು ಸಾವಿರ ರೂ. ಬೇಡಿಕೆ ಇಟ್ಟಿದ್ದರು.
ರತ್ನವ್ವ ಈ ಮಾಹಿತಿಯನ್ನು ನ್ಯಾಯವಾದಿ ರಾಜ್ಕುಮಾರ್ ತುಕಾರಾಮ ಶಿಂಧೆಗೆ ತಿಳಿಸಿದ್ದರು. ಶಿಂಧೆ ಅವರು ಜು.18 ರಂದು ಲೋಕಾಯುಕ್ತರಿಗೆ ದೂರು ಸಲ್ಲಿಸಿದರು. ಮರುದಿನ ಬುಧವಾರವೇ ಲೋಕಾಯುಕ್ತರು ಭೂ ದಾಖಲೆಗಳ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಲೋಕಾ ಅಧಿಕಾರಿಗಳು ಬಲೆ ಬೀಸಿದಾಗ ಕಂಪ್ಯೂಟರ್ ಆಪರೇಟರ್ ಪರೇಶ್ ಸತ್ತಿ ರಾಜ್ಕುಮಾರ್ ನ್ಯಾಯವಾದಿ ಶಿಂಧೆ ಅವರಿಂದ ಐದು ಸಾವಿರ ರೂ. ಲಂಚ ಸ್ವೀಕರಿಸುತ್ತಿರುವುದು ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಉಪತಹಸೀಲ್ದಾರ್ ಅಭಿಷೇಕ ಬೊಂಗಾಳೆ ಅವರೂ ಭಾಗಿಯಾಗಿರುವುದು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಅವರನ್ನೂ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಡಿವೈಎಸ್ಪಿ ಹನುಮಂತರಾವ್ ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕ ಅಜಿತ ಕಲಾಡವಿ, ಅನ್ನಪೂರ್ಣಾ ಜೆ., ರಘು ಸೇರಿ 10 ಜನರ ತಂಡ ದಾಳಿ ನಡೆಸಿದೆ.