ದಾವಣಗೆರೆ: ಪೋಕ್ಸೋ ಪ್ರಕರಣದಲ್ಲಿ ಸಹಾಯ ಮಾಡಲು ಫಿರ್ಯಾದಿಯಿಂದ ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲಾ ಸತ್ರ ಮತ್ತು ವಿಶೇಷ (ಪೋಕ್ಸೋ) ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಕೋಟೆಗೌಡ್ರ ಭಾನುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪ್ರಕರಣ ಸಂಬಂಧ ನೆರವಾಗಲು ದಾವಣಗೆರೆ ತಾಲೂಕಿನ ಕಿತ್ತೂರು ಗ್ರಾಮದ ಮದನಕುಮಾರ ಎಂಬುವರಿಂದ ರೇಖಾ ಕೋಟೆಗೌಡ್ರ 3 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 1.13 ಲಕ್ಷ ರೂ. ಪಡೆದಿದ್ದು, ಬಾಕಿ 1.87 ಲಕ್ಷ ರೂ. ನೀಡುವಂತೆ ಕೇಳಿದ್ದರು. ಇದರ ಖಾತ್ರಿಗಾಗಿ, ಮದನಕುಮಾರ ಅವರ ಸಹಿಯುಳ್ಳ ಬ್ಯಾಂಕ್ ಚೆಕ್ ಅನ್ನು ಪಡೆದಿದ್ದರು.
ಬಾಕಿ ಹಣ ನೀಡಲಾಗದ ಫಿರ್ಯಾದಿ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು. ಭಾನುವಾರ ರೇಖಾ, ತಮ್ಮ ದಾವಣಗೆರೆ ನಿವಾಸದಲ್ಲಿ 1.87 ಲಕ್ಷ ರೂ.ಗಳ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲಂಚದ ಹಣ ಹಾಗೂ ಈ ಹಿಂದೆ ಪಡೆದಿದ್ದ ಖಾಲಿ ಚೆಕ್ ವಶಪಡಿಸಿಕೊಳ್ಳಲಾಗಿದ್ದು ತನಿಖೆ ಮುಂದುವರಿದಿದೆ.
ಲೋಕಾಯಕ್ತ ಎಸ್ಪಿ ಎಂ.ಎಸ್.ಕೌಲಾಪುರೆ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಎಚ್.ಎಚ್. ಆಂಜನೇಯ, ಎಚ್.ಎಸ್. ರಾಷ್ಟ್ರಪತಿ ನೇತೃತ್ವದಲ್ಲಿ ಅವರ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದರು.