ವಿಜಯಪುರ: ರಾಜ್ಯಾದ್ಯಂತ ಕರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಇದೀಗ ಎಲ್ಲೆಡೆ ಲಾಕ್ ಡೌನ್ ಮಾತುಗಳು ಕೇಳಿ ಬರುತ್ತಿವೆ. ಆದ್ರೇ, ಲಾಕ್ಡೌನ್ ಮಾಡೋದರಿಂದ ಏನೂ ಪ್ರಯೋಜನ ಇಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ವಿಜಯಪುರದ ಮಧಬಾವಿಯಲ್ಲಿ ಶನಿವಾರ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಲಾಕ್ಡೌನ್ ಮಾಡಿದ್ರೆ ಪ್ರಯೋಜನ ಆಗುತ್ತೆ ಅಂತಾ ಅನಿಸೋದಿಲ್ಲ. ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಮಾಡಿದ್ದಾರೆ. ಆದ್ರೆ ಅಲ್ಲಿ ಏನೂ ಬಂದ್ ಇಲ್ಲ. ಎಂದಿನಂತೆ ಎಲ್ಲ ಜನಜೀವನ ನಡೆಯುತ್ತಿದೆ ಎಂದರು.
ಅದಕ್ಕಾಗಿ ಮುಂದಿನ ಬಾಗಿಲಿಗೆ ಕೀಲಿ ಹಾಕಿ ಇಟ್ಟಿದ್ದಾರೆ ಅಷ್ಟೇ. ಹೊರತು ಮೂರು ಕಡೆಗಳಲ್ಲಿ ಗೋಡೆಯೇ ಇಲ್ಲ. ಇನ್ನು ಲಾಕ್ಡೌನ್ನಿಂದ ಜನರಿಗೆ ತೊಂದರೆ ಆಗುತ್ತೆ. ಬಡವರು ಸಾಲ ಮಾಡಿ ವ್ಯಾಪಾರ ಮಾಡ್ತಿದ್ದಾರೆ. ಲಾಕ್ಡೌನ್ ಆದ್ರೆ ಅವರೆಲ್ಲ ಏನ್ ಮಾಡಬೇಕು ಎಂದು ಸರ್ಕಾರಕ್ಕೆ ತಮ್ಮ ಕಿವಿ ಮಾತು ಹೇಳಿದರು.