More

    ರೈತರೊಂದಿಗೆ ಪಾರದರ್ಶಕವಾಗಿ ವ್ಯವಹರಿಸಿ

    ಬಾಗಲಕೋಟೆ: ಸಕ್ಕರೆ ಕಾರ್ಖಾನೆಗಳಲ್ಲಿ ರೈತರಿಂದ ಪಡೆಯುವ ಕಬ್ಬಿನ ತೂಕದಲ್ಲಿ ವ್ಯತ್ಯಾಸವಾಗುತ್ತದೆಂಬ ದೂರುಗಳಿದ್ದು, ಕಾರ್ಖಾನೆಯ ಮಾಲೀಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು ರೈತರೊಂದಿಗೆ ಪಾರದರ್ಶಕವಾಗಿ ವ್ಯವಹರಿಸಬೇಕು ಎಂದು ಜಿಲ್ಲಾಧಿಕಾರಿ ಜಾನಕಿ.ಕೆ.ಎಂ ಹೇಳಿದರು.

    ಜಿಲ್ಲಾಧಿಕಾರಿ ಕಛೇರಿ ಸಭಾಭವನದಲ್ಲಿ ಬುಧವಾರ ಜಿಲ್ಲೆಯ ಸಕ್ಕರೆ ಕಾರ್ಖಾನೆಯ ಮಾಲೀಕರು, ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳ ಮಾಲೀಕರಗಿಂತ ರೈತರ ಹಿತ ಕಾಪಾಡುವುದು ಮುಖ್ಯವಾಗಿದೆ. ರೈತರಿಗೆ ತೂಕ ಮತ್ತು ಅಳತೆ ಕುರಿತು ಪ್ರಾತ್ಯಕ್ಷೀತೆ ನೀಡಿ, ಎಲ್ಲೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ರೈತರಿಂದ ತೂಕ ನಿಯಂತ್ರಗಳ ಬಗ್ಗೆ ಯಾವುದೇ ದೂರುಗಳು ಸ್ವೀಕೃತವಾದಲ್ಲಿ, ಕಾನೂನು ಮಾಪನ ಶಾಸ್ತ್ರ ಇಲಾಖಾ ಅಧಿಕಾರಿ ಸಂಬಂಧಿಸಿದ ಕಾರ್ಖಾನೆಗೆ ಭೇಟಿ ನೀಡಿ ರೈತರ ಸಮ್ಮುಖದಲ್ಲಿ ಪರಿಶೀಲಿಸಿ ಕೈಗೊಂಡ ಕ್ರಮದ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

    2023-24ನೇ ಸಾಲಿನ ಕಬ್ಬು ಅರೆಯುವ ಹಂಗಾಮನ್ನು ನವೆಂಬರ್ .1ರಿಂದ 15ರ ನಡುವೆ ಪ್ರಾರಂಭಿಸಲು ಸರ್ಕಾರದ ನಿರ್ದೇಶನವಿದ್ದು, ಮಾಲೀಕರು ಕಾರ್ಖಾನೆಗಳನ್ನು ತೆರೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ರೈತರಿಗೆ ಕಬ್ಬು ಬೆಲೆ ಪಾವತಿಸಲು ಬಾಕಿ ಉಳಿಸಿಕೊಂಡ ಕಾರ್ಖಾನೆಗಳು ಪಾವತಿಸಲು ಕ್ರಮ ಕೈಗೊಳ್ಳಬೇಕು. ರೈತರು ಕಾರ್ಖಾನೆಗೆ ಭೇಟಿ ನೀಡಿದಾಗ ಸೌಜ್ಯನದಿಂದ ವರ್ತಿಸಿ ಅವರಿಗೆ ಸಂದೇಶ ಪರಿಹಾರ ಮಾಡಿ, ಅವಶ್ಯವಿದ್ದಲ್ಲಿ ಮಾಹಿತಿಯನ್ನು ನೀಡಿ ಎಂದು ತಿಳಿಸಿದರು.

    ಜಿಲ್ಲಾ ಆಹಾರ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಡಿ ಮಾತನಾಡಿ, ಕಾರ್ಖಾನೆಗಳಿಗೆ ರೈತರು ಕಬ್ಬು ಕಳುಹಿಸಿದ 14 ದಿನಗಳೊಳಗಾಗಿ ಕಬ್ಬಿನ ಬೆಲೆ ಸಂಪೂರ್ಣವಾಗಿ ಸಂದಾಯ ಮಾಡತಕ್ಕದ್ದು, ತಪ್ಪಿದಲ್ಲಿ ವಿಳಂಬಿತ ಅವಧಿಗೆ ಶೇಕಡಾ 15% ರಂತೆ ಬಡ್ಡಿಯೊಂದಿಗೆ ಅಸಲನ್ನು ಪಾವತಿಸಬೇಕಾಗುತ್ತದೆ. ಸರ್ಕಾರದ ನಿರ್ದೇಶನದಂತೆ ಕಬ್ಬು ಕಟಾವು ಮತ್ತು ಸಾಗಾಣಿಕೆ ಕಟಾವು ಮಾಡುವ ನಿಖರವಾದ ಮಾಹಿತಿಯನ್ನು ನೋಟಿಸ್ ಬೋರ್ಡನಲ್ಲಿ ಹಾಕಿರಬೇಕು ರೈತರ ಕಬ್ಬನ್ನು ಹಿರಿತನದ ಆಧಾರದ ಮೇಲೆ ಪಟ್ಟಿ ಸಿದ್ಧಪಡಿಸಿ, ಕಾರ್ಖಾನೆಯ ನೋಟಿಸ್ ಬೋರ್ಡ್‍ಗೆ ಲಗತ್ತಿಸಿ, ಹಿರಿತನದ ಆಧಾರದಲ್ಲಿಯೇ ಕಬ್ಬನ್ನು ರೈತರಿಂದ ಪಡೆಯಬೇಕು ಎಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ಕಬ್ಬು ಸರಬರಾಜು ಮಾಡುವ ಟ್ರ್ಯಾಕ್ಟರ್, ಚೆಕ್ಕಡಿ ಮತ್ತು ಇತರೆ ವಾಹನಗಳ ಹಿಂದುಗಡೆ ರೇಡಿಯಮ್ ಅಂಟಿಸುವ ವ್ಯವಸ್ಥೆ ಮಾಡಿಸಬೇಕು. ಬೇರೆ ಕಡೆಯಿಂದ ಕಬ್ಬು ಕಟಾವು ಮಾಡಲು ಬಂದ ತಂಡಗಳ ಹೆಸರು,ವಿಳಾಸ ಇತ್ಯಾದಿ ವಿವರವುಳ್ಳ ಒಂದು ಪ್ರತ್ಯೇಕ ರೆಜಿಸ್ಟರ್ ನಿರ್ವಹಿಸುವದರೊಂದಿಗೆ, ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ಒದಗಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರು.
    ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ಕೈಗಾರಿಕಾ ಇಲಾಖೆ ಜೆಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ ಸೇರಿದಂತೆ ಸಕ್ಕರೆ ಕಾರ್ಖಾನೆ ಮಾಲಿಕರು ಹಾಗೂ ಕಾರ್ಖಾನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts