ಲಕ್ಷ್ಮೇಶ್ವರ: ಕಳೆದ 1 ವಾರದಿಂದ ಕೊಂಚ ಬಿಡುವು ನೀಡಿದ್ದ ಮಳೆ ಸೋಮವಾರ ಸಂಜೆ ಏಕಾಏಕಿ 1 ಗಂಟೆಗೂ ಹೆಚ್ಚು ಕಾಲ ಸುರಿಯಿತು. ಜಮೀನಿನಲ್ಲಿ ಅಳಿದುಳಿದ ಶೇಂಗಾ, ಉಳ್ಳಾಗಡ್ಡಿ, ಹತ್ತಿ ಇತರೆ ಬೆಳೆಯನ್ನು ರಾಶಿ ಮಾಡುವ ಕಾರ್ಯದಲ್ಲಿ ರೈತರು ತೊಡಗಿದ್ದರು. ಅಲ್ಲದೆ, ಹಿಂಗಾರು ಬಿತ್ತನೆಗೆ ಭೂಮಿ ಹದಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಆದರೆ, ಮತ್ತೆ ಸುರಿದ ಮಳೆಯಿಂದ ರೈತರು ತೊಂದರೆ ಅನುಭವಿಸುವಂತಾಯಿತು. ಹಬ್ಬದ ಸಂತೆಗಾಗಿ ಗ್ರಾಮೀಣ ಜನರು ಪಟ್ಟಣಕ್ಕೆ ಆಗಮಿಸಿದ್ದರಿಂದ ವ್ಯಾಪಾರ ವಹಿವಾಟಿಗೂ ಮಳೆ ಅಡ್ಡಿಯಾಯಿತು.
ಮಳೆ ಬಿಡುವಾಗಿದ್ದರಿಂದ ಎಪಿಎಂಸಿಗೆ 4 ಸಾವಿರ ಚೀಲ ಶೇಂಗಾ ಆವಕವಾಗಿತ್ತು. ತರಕಾರಿ ಮಾರ್ಕೆಟ್ಗೆ ನೂರಾರು ಚೀಲ ಉಳ್ಳಾಗಡ್ಡಿ , ತರಕಾರಿ ಬಂದಿತ್ತು. ರೈತರು ಜಮೀನಿನಲ್ಲಿ ಕೃಷಿ ಕೆಲಸ, ಶೇಂಗಾ ಹೊಟ್ಟು ರಕ್ಷಿಸುವ, ಹತ್ತಿ ಬಿಡಿಸುವ ಕಾರ್ಯದಲ್ಲಿ ತೊಡಗಿದ್ದರು. ಮಳೆಯಿಂದಾಗಿ ಮಾರ್ಕೆಟ್ನಲ್ಲಿನ ಶೇಂಗಾ, ಉಳ್ಳಾಗಡ್ಡಿ ರಕ್ಷಣೆಗೆ ಪರದಾಡುವಂತಾಯಿತು. ಇನ್ನು ಗಾಳಿ-ಮಳೆಯಿಂದ 2 ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಸಂಪರ್ಕ ಕಡಿತವಾಗಿತ್ತು.