ಹಿರೇಕೆರೂರ: ಪಟ್ಟಣದ ಟಿಎಪಿಸಿಎಂಎಸ್ ರಸಗೊಬ್ಬರ ದಾಸ್ತಾನು ಗೋದಾಮಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ರಸಗೊಬ್ಬರ, ಬೀಜ ಸೇರಿ ಕೃಷಿ ಪರಿಕರಗಳನ್ನು ಸರ್ಕಾರ ನಿಗದಿ ಪಡಿಸಿದ ದರದಲ್ಲಿ ಮಾರಾಟ ಮಾಡಬೇಕು. ನಿಗದಿತ ದರಕ್ಕಿಂತ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿದರೆ ಅಂತಹ ಅಂಗಡಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ್ ರಿಯಾಜುದ್ದಿನ್ ಬಾಗವಾನ್ ಅವರಿಗೆ ಸಚಿವರು ಸೂಚಿಸಿದರು.
ಟಿಎಪಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿ, ಹಲವಾರು ವರ್ಷಗಳಿಂದ ನಮ್ಮ ಟಿಎಪಿಎಂಎಸ್ ವತಿಯಿಂದ ರೈತರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ನಿಗದಿ ಪಡಿಸಿದ ದರಕ್ಕೆ ರಸಗೊಬ್ಬರ ಮಾರಾಟ ಮಾಡುತ್ತ ಬಂದಿದ್ದು, ರಾಜ್ಯದಲ್ಲಿಯೇ ನಮ್ಮ ಸಂಘವು ಹೆಸರುವಾಸಿಯಾಗಿದೆ. ರಟ್ಟಿಹಳ್ಳಿ, ಹಿರೇಕೆರೂರ ತಾಲೂಕಿನ ಎಲ್ಲ ರೈತರಿಗೆ ಪ್ರಸಕ್ತ ಸಾಲಿನ ಬಿತ್ತನೆಗೆ ಅನುಗುಣವಾಗಿ ಹಾಗೂ ಅಗತ್ಯಕ್ಕೆ ತಕ್ಕಂತೆ ಈಗಾಗಲೇ ಗೊಬ್ಬರ ಸಂಗ್ರಹಿಸಿ ಇಡಲಾಗಿದ್ದು, ಬೇಡಿಕೆ ಹೆಚ್ಚಾದಂತೆ ಗೊಬ್ಬರ ದಾಸ್ತಾನು ಮಾಡಿಕೊಂಡು ವಿತರಿಸಲಾಗುವುದು ಎಂದರು.
ಗೋದಾಮಿನ ಹಮಾಲರಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಉಚಿತವಾಗಿ ಮಾಸ್ಕ್ ವಿತರಿಸಿದರು. ಟಿಎಪಿಸಿಎಂಎಸ್ ವ್ಯವಸ್ಥಾಪಕ ಉಜ್ಜಪ್ಪ ಕಳಗೊಂಡದ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ, ರವಿಶಂಕರ ಬಾಳಿಕಾಯಿ, ಎಂ.ಎಸ್. ಕೋರಿಗೌಡ್ರ, ಸಿಪಿಐ ಮಂಜುನಾಥ ಪಂಡಿತ, ಪಿಎಸ್ಐ ದೀಪು ಎಂ.ಟಿ., ಇತರರು ಇದ್ದರು.