ಚನ್ನರಾಯಪಟ್ಟಣ: ರಕ್ತದಾನ ಮಾಡಿದಲ್ಲಿ ಅಪಘಾತಕ್ಕೆ ಒಳಗಾಗಿರುವ ಹಾಗೂ ಹಲವು ಕಾಯಿಲೆಗಳಿಂದ ಬಳಲುತ್ತಿರುವ ಅದೆಷ್ಟೋ ಜನತೆಗೆ ನೆರವಾದಂತಾಗುತ್ತದೆ ಎಂದು ತಾಲೂಕು ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ದಿಡಗ ಬಸವರಾಜ್ ಹೇಳಿದರು.
ತಾಲೂಕಿನ ದಿಡಗ ಗ್ರಾಮದ ಸರ್ಕಾರಿ ಆರೋಗ್ಯ ಕೇಂದ್ರದ ಆವರಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ೭೨ ನೇ ಹುಟ್ಟು ಹಬ್ಬದ ಪ್ರಯುಕ್ತ ತಾಲೂಕು ಬಿಜೆಪಿ ಯುವಮೋರ್ಚಾ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಇದರಿಂದ ಹಲವರ ಜೀವ ಹಾಗೂ ಜೀವನ ಉಳಿಯಲಿದೆ ಎಂದರು.
ಕಳೆದ ೩-೪ ವರ್ಷಗಳಿಂದ ಕರೊನಾ ಹಿನ್ನೆಲೆ ಇಂತಹ ಶಿಬಿರಗಳು ನಡೆಯದ ಪರಿಣಾಮ ಜಿಲ್ಲೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಎದುರಾಗಿದ್ದು ಯುವ ಸಮುದಾಯವು ರಕ್ತದಾನ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ದೇಶದ ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸುವ ಸಲುವಾಗಿ ಅಗ್ನಿಪಥ್ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ರೂಪಿಸುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೊಸ ಹೆಜ್ಜೆ ಇರಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ೫೫ ಕ್ಕೂ ಹೆಚ್ಚು ಮಂದಿ ಯುವಕರು ರಕ್ತದಾನ ಮಾಡಿದರು. ಬಿಜೆಪಿ ಯುವ ಮುಖಂಡ ಚಿದಾನಂದ್ ಸಿ.ಆರ್, ಬಿಜೆಪಿ ತಾಲೂಕು ಅಧ್ಯಕ್ಷ ರವಿ ದಮ್ಮನಿಂಗಲ, ಉಪಾಧ್ಯಕ್ಷ ಗಂಗಾಧರ್, ಯುವಮೋರ್ಚಾ ಜಿಲ್ಲಾಧ್ಯಕ್ಷ ಅನೂಪ್, ಪ್ರಮುಖರಾದ ರಘುಗೌಡ, ಧನರಾಜ್, ಗವೀಶ್, ಪ್ರವೀಣ್, ಉಮೇಶ್, ಧನಂಜಯ್, ಕುಮಾರ್, ಸುಜಿತ್, ಭರತ್, ಆಶಾ ಕಾರ್ಯಕರ್ತೆಯರಾದ ಪುಷ್ಪ, ದೀಪಿಕಾ, ಹಾಸನದ ಜೀವ ಸಂಜೀವಿನಿ ರಕ್ತಕೇಂದ್ರದ ಸಿಬ್ಬಂದಿ ಹಾಗೂ ಇತರರು ಇದ್ದರು.