ಬೆಳಗಾವಿ: ರಕ್ತದಾನದಿಂದ ಆರೋಗ್ಯ ಸುಧಾರಣೆ ಆಗುತ್ತದೆ. ರಕ್ತದಾನ ಶ್ರೇಷ್ಠ ದಾನವಾಗಿದ್ದು, ಎಲ್ಲರೂ ಒಮ್ಮೆಯಾದರೂ ರಕ್ತದಾನ ಮಾಡಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಶಿವಾನಂದ ಮಾಸ್ತಿಹೋಳಿ ಹೇಳಿದ್ದಾರೆ. ನಗರದ ಮಹಾವೀರ ಭವನದಲ್ಲಿ ಔಷಧ ನಿಯಂತ್ರಣ ಇಲಾಖೆ, ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗ ನೈಜೇಷನ್, ವಿವಾಫಾರ್ಮಾ, ಅಥರ್ವ್ ಫೌಂಡೇಷನ್, ವಿ-ಕೇರ್, ವೆಲ್ನೆಸ್, ಅಪೊಲೋ, ಫಾರ್ಮಾ ಅಸೋಸಿಯೇಷನ್ನಿಂದ ಗುರುವಾರ ಆಯೋಜಿಸಿದ್ದ ರಕ್ತದಾನ ಬೃಹತ್ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಔಷಧ ನಿಯಂತ್ರಣ ಇಲಾಖೆ ಸಹಾಯಕ ಔಷಧ ನಿಯಂತ್ರಕ ರಘುರಾಮ ಎನ್., ಕರ್ಣಾಟಕ ಬ್ಲಡ್ ಬ್ಯಾಂಕ್ ಸಂಘಟನೆ ಚೇರ್ಮನ್ ಗಿರೀಶ, ಜಿತೋ ಕೆಕೆಜಿ ಝೋನ್ ಕಾರ್ಯದರ್ಶಿ ವಿಕ್ರಮ ಜೈನ್, ಜೀತೋ ಬೆಳಗಾವಿ ವಿಭಾಗದ ಉಪಾಧ್ಯಕ್ಷ ಮುಖೇಶ ಫೋರವಾಲ್, ಪ್ರಧಾನ ಕಾರ್ಯದರ್ಶಿ ಅಮಿತ ದೋಷಿ, ಡಾ.ಮಹಾಂತೇಶ ರಾಮಣ್ಣವರ ಇತರರಿದ್ದರು. ಶಿಬಿರದಲ್ಲಿ 432 ಜನ ರಕ್ತದಾನ ಮಾಡಿದರು. ಕೆಎಲ್ಇ ಆಸ್ಪತ್ರೆ ರಕ್ತ ಭಂಡಾರ, ಭಗವಾನ ಮಹಾವೀರ ಬ್ಲಡ್ ಬ್ಯಾಂಕ್, ಬಿಮ್ಸ್ ರಕ್ತ ಭಂಡಾರ, ಬೆಳಗಾವಿ ಬ್ಲಡ್ ಬ್ಯಾಂಕ್ ಸಂಸ್ಥೆಗಳಿಗೆ ರಕ್ತವನ್ನು ಹಸ್ತಾಂತರಿಸಲಾಯಿತು. ಹರ್ಷವರ್ಧನ ಇಂಚಲ, ಪ್ರವೀಣ ಖೇಮಲಾಪುರ ನಿರ್ವಹಿಸಿದರು.