More

    ರಂಗಿನಾಟದಲ್ಲಿ ಮಿಂದೆದ್ದ ಜನ

    ಗದಗ: ಬೀದಿ ಬೀದಿಗಳಲ್ಲಿ ಕಾಮಣ್ಣನ ದಹನ… ಎಲ್ಲೆಲ್ಲೂ ಹಲಗೆ- ತಮಟೆಗಳ ಸದ್ದು… ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದ ಮಕ್ಕಳು, ಯುವಕ-ಯುವತಿಯರು…

    ರಂಗಪಂಚಮಿ ದಿನವಾದ ಗುರುವಾರ ಗದಗ-ಬೆಟಗೇರಿ ಅವಳಿ ನಗರದ ಜನ ಓಕುಳಿಯಾಟದಲ್ಲಿ ಮಿಂದೆದ್ದರು. ಎಲ್ಲಿ ನೋಡಿದರಲ್ಲಿ ಬಣ್ಣವೋ ಬಣ್ಣ. ಮಕ್ಕಳು, ಮಹಿಳೆಯರು, ಯುವಕರು, ಹಿರಿಯರು ಸೇರಿ ಬಣ್ಣದಾಟವಾಡಿ ಸಾಂಪ್ರದಾಯಿಕ ಹೋಳಿ ಹಬ್ಬದ ಸಂಭ್ರಮಾಚರಣೆಗೆ ಸಾಕ್ಷಿಯಾದರು. ಕರೊನಾ ವೈರಸ್ ಭೀತಿಯ ನಡುವೆಯೂ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

    ಅವಳಿ ನಗರದ ಬಡಾವಣೆ, ಓಣಿ ಹಾಗೂ ಪ್ರಮುಖ ವೃತ್ತಗಳಲ್ಲಿ ಸೂರ್ಯ ಉದಯಿಸುವ ಮುನ್ನ ಕಾಮದಹನ ಮಾಡಿದ ನಂತರ ರಂಗಿನಾಟಕ್ಕೆ ಚಾಲನೆ ಸಿಕ್ಕಿತು. ಯುವಕರು ಗುಂಪು ಗುಂಪಾಗಿ ಗೆಳೆಯರಿಗೆ, ಸಂಬಂಧಿಕರಿಗೆ ಬಣ್ಣ ಹಚ್ಚುವುದು, ಕೇಕೆ ಹಾಕುತ್ತ ಜೋರಾಗಿ ಬೈಕ್ ಓಡಿಸುವುದು ಕಂಡು ಬಂದಿತು. ನಗರದ ರಾಜೀವಗಾಂಧಿ ನಗರ, ವಿವೇಕಾನಂದ ನಗರ, ಮಸಾರಿ, ಹುಡ್ಕೋ ಕಾಲನಿ, ಕಿಲ್ಲಾ, ದಾಸರಗಲ್ಲಿ, ಶಹಪೂರಪೇಟೆ, ಕಳಸಾಪುರ ರಸ್ತೆ ಸೇರಿ ವಿವಿಧ ಬಡಾವಣೆಯಲ್ಲಿ ಯುವತಿಯರು ಹಾಗೂ ಮಹಿಳೆಯರು ಪರಸ್ಪರ ಬಣ್ಣ ಎರಚಿ ನೃತ್ಯ ಮಾಡಿ ಸಂಭ್ರಮಿಸಿದರು.

    ಹಾಡು, ಕುಣಿತ : ಕೆಲವೆಡೆ ಹೋಳಿ ಹಬ್ಬದ ಸಂಕೇತವಾದ ಹಲಗೆ ಬಾರಿಸುತ್ತ ಯುವಕರು ಚಲನಚಿತ್ರ ಗೀತೆಗಳಿಗೆ ಹೆಜ್ಜೆ ಹಾಕಿ ಖುಷಿ ಪಟ್ಟರು. ಅವಳಿ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಅಕ್ಕಪಕ್ಕದ ಊರುಗಳಿಂದ ಸಾರ್ವಜನಿಕರು ಆಗಮಿಸದ ಕಾರಣ ರಸ್ತೆ ಹಾಗೂ ಮಾರುಕಟ್ಟೆಗಳು ಬಿಕೋ ಎನ್ನುತ್ತಿದ್ದವು.

    ರತಿ-ಮನ್ಮಥರಿಗೆ ಸಿಂಗಾರ: ಗದಗ ನಗರದ ಕಿಲ್ಲಾ ಚಂದ್ರಸಾಲಿಯಲ್ಲಿ ಪ್ರತಿಷ್ಠಾಪಿಸಿದ್ದ ಸರ್ಕಾರಿ ಕಾಮಣ್ಣ-ರತಿ ಮೂರ್ತಿಯನ್ನು ಆಭರಣಗಳಿಂದ ಸಿಂಗರಿಸಲಾಗಿತ್ತು. ಭಕ್ತರು ಕಾಯಿ, ಕರ್ಪರ, ಹಣ್ಣು, ಹೋಳಿಗೆ ನೈವೇದ್ಯ ಅರ್ಪಿಸಿದರು. ಮದುವೆಯಾಗದ ಯುವಕರು ರತಿಗೆ, ಯುವತಿಯರು ಮನ್ಮಥನ ಕೈಗೆ ಕಂಕಣ ಕಟ್ಟಿದರೆ, ಮಕ್ಕಳಾಗದವರು ಕಾಮಣ್ಣ ಕೈಗೆ ಬೆಳ್ಳಿಯ ತೊಟ್ಟಿಲು ಕಟ್ಟಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ರತಿ-ಕಾಮಣ್ಣರ ಮೆರವಣಿಗೆ ನಡೆಯಲಿಲ್ಲ.

    ಬಸ್ ಸಂಚಾರ ಬಂದ್ : ಓಕುಳಿ ನಿಮಿತ್ತ ಅವಳಿ ನಗರದಲ್ಲಿ ಬಸ್ ಸಂಚಾರ ಬಂದ್​ಗೊಳಿಸಲಾಗಿತ್ತು. ಜತೆಗೆ ಹೋಟೆಲ್, ಖಾನಾವಳಿ, ತಂಪು ಪಾನೀಯ ಅಂಗಡಿ, ಕಬ್ಬಿನ ಹಾಲು, ಹಣ್ಣು-ಹಂಪಲು ಮತ್ತಿತರ ಅಂಗಡಿಗಳೆಲ್ಲ ಬಾಗಿಲು ಮುಚ್ಚಿದ್ದರಿಂದ ಪರಸ್ಥಳದಿಂದ ನಗರಕ್ಕೆ ಆಗಮಿಸಿದ್ದ ಪ್ರಯಾಣಿಕರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts