More

    ಯಶಸ್ವಿಗೊಂಡ ಮಕ್ಕಳ ಸಾಹಿತ್ಯ ಸಂಭ್ರಮ:ಟಿ.ಎ. ಪ್ರಶಾಂತಬಾಬು

    ಹಾಸನ: ಫೆಬ್ರವರಿ – ಮಾರ್ಚ್ ತಿಂಗಳಲ್ಲಿ 20 ದಿನಗಳ ಅವಧಿಯಲ್ಲಿ ಇಡೀ ರಾಜ್ಯಾದ್ಯಂತ ಕನ್ನಡ ಸಾಹಿತ್ಯದಲ್ಲಿ ಒಂದು ಹೊಸ ಅಧ್ಯಾಯ ರಚಿಸಲಾಯಿತು, ಅದೇ ಮಕ್ಕಳ ಸಾಹಿತ್ಯ ಸಂಭ್ರಮ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎ. ಪ್ರಶಾಂತಬಾಬು ಹೇಳಿದರು.
    ನಗರದ ಭಾರತ ಜ್ಞಾನ ವಿಜ್ಞಾನ ಸಮಿತಿಯು ಎವಿಕೆ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಸಂಭ್ರಮ ಯಶಸ್ವಿಗೊಳಿಸಿದ ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅಭಿನಂದನಾ ಪತ್ರ ವಿತರಿಸಿ ಮಾತನಾಡಿದ ಅವರು, ಕಲೆ ಮತ್ತು ಸಾಹಿತ್ಯಕ್ಕೆ ಇರುವ ದೊಡ್ಡ ಶಕ್ತಿ ಎಂದರೆ ಅದು ಎಲ್ಲವನ್ನೂ ಒಳಗೊಳ್ಳುವ ಗುಣ. ಅದಕ್ಕೆ ಹೆಣ್ಣು-ಗಂಡು ಎನ್ನುವ ಭೇದವಿಲ್ಲ. ಬಡವ- ಶ್ರೀಮಂತ ಎನ್ನುವ ಭೇದವಿಲ್ಲ. ದೇಶ-ಭಾಷೆಗಳ ಗಡಿಯಿಲ್ಲ. ಹಾಗಾಗಿ ಕಲೆ ಮತ್ತು ಸಾಹಿತ್ಯ ಮನುಷ್ಯ ಕುಲವನ್ನು ಸೌಹಾರ್ಧ ನೆರಳಿನಲ್ಲಿ ಕಟ್ಟಬಲ್ಲ ಅತಿ ದೊಡ್ಡ ಆಕರಗಳು. ಈ ಆಕರಗಳನ್ನು ಎಳೆಯ ವಯಸ್ಸಿನಲ್ಲೇ ಮಕ್ಕಳಲ್ಲಿ ಬೇರೂರಿಸಿದರೆ ನೆಲಕ್ಕೊಂದು ಸಾಂಸ್ಕೃತಿಕ ಪ್ರತಿಭೆಯನ್ನು ಕೊಟ್ಟಂತಾಗುತ್ತದೆ. ಈ ಪರಿಕಲ್ಪನೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಆರ್‌ಡಿಪಿಆರ್ ಜತೆಗೂಡಿ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ನಡೆಸಿದ ಬೃಹತ್ ಮಕ್ಕಳ ಹಬ್ಬವೇ ಮಕ್ಕಳ ಸಾಹಿತ್ಯ ಸಂಭ್ರಮ ಎಂದು ವಿಶ್ಲೇಷಿಸಿದರು.
    ಆರ್‌ಡಿಪಿಆರ್ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಾಲಯಗಳನ್ನು ತೆರೆದಿದೆ. ಅದಕ್ಕೆ ಬೇಕಾಗಿರುವ ಮೂಲಭೂತ ಪರಿಕರಗಳನ್ನು ಕೂಡ ಒದಗಿಸಿದೆ. ಆದರೂ ಗ್ರಂಥಾಲಯಗಳಿಗೆ ಮಕ್ಕಳಾಗಲಿ, ಜನರಾಗಲಿ ಬರುತ್ತಿಲ್ಲ ಏಕೆ ಎಂದು ಯೋಚಿಸುವಾಗ ಕಂಡುಕೊಂಡ ಸತ್ಯ ಗ್ರಂಥಾಲಯಗಳಲ್ಲಿ ಮಕ್ಕಳಿಗೆ ಬೇಕಾದ ಪುಸ್ತಕವಿಲ್ಲ ಎಂಬುದು. ಕನ್ನಡ ಸಾಹಿತ್ಯದಲ್ಲಿ ಶ್ರೀಮಂತ ಸಾಹಿತ್ಯವಿದ್ದರೂ ಮಕ್ಕಳ ಸಾಹಿತ್ಯ ಬಹಳ ಕಡಿಮೆ ಇದೆ. ಹಾಗಾಗಿ ಮಕ್ಕಳ ಸಾಹಿತ್ಯ ರಚನೆ ಮಕ್ಕಳಿಂದಲೇ ಮಾಡಿಸಬೇಕು ಎಂದು ಮನಗಂಡು ಮಕ್ಕಳಿಂದಲೇ ಸಾಹಿತ್ಯ ಸೃಷ್ಟಿಸಿ ಪುಸ್ತಕ ಮಾಡಿ ಗ್ರಂಥಾಲಯಗಳಿಗೆ ತುಂಬಬೇಕು ಎಂಬ ಮಹದಾಸೆಯಿಂದ ಮಕ್ಕಳ ಸಾಹಿತ್ಯ ಸಂಭ್ರಮವನ್ನು ಆಯೋಜಿಸಿತ್ತು. ಕೇವಲ 20 ದಿನಗಳಲ್ಲಿ ರಾಜ್ಯಾದ್ಯಂತ 73 ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು 8000 ಮಕ್ಕಳು, ಒಂದೂವರೆ ಸಾವಿರ ಶಿಕ್ಷಕರು ಕೂಡಿಕೊಂಡು 20,000 ಪುಟಗಳ ಮಕ್ಕಳ ಸಾಹಿತ್ಯವನ್ನು ರಚಿಸಿರುವುದು ಕನ್ನಡ ಸಾಹಿತ್ಯದ ಒಂದು ಮಹತ್ವ ಘಟ್ಟ ಎಂದು ಹೇಳಿದರು.
    ಭಾರತ ಜ್ಞಾನ ವಿಜ್ಞಾನ ಸಮಿತಿಯ ಗೌರವಾಧ್ಯಕ್ಷೆ ಡಾ. ಎ. ಸಾವಿತ್ರಿ ಮಾತನಾಡಿ, ವೈಜ್ಞಾನಿಕ ಮನೋವೃತ್ತಿ, ಪರಿಸರ ಕಾಳಜಿ, ಆರೋಗ್ಯದ ಚಿಂತನೆ ಹಾಗೂ ಸಾಂವಿಧಾನಿಕ ಮೌಲ್ಯಗಳು ಮಾನವೀಯ ಅಂತಃಕರಣದ ಮುತ್ತು-ರತ್ನಗಳು. ಇವನ್ನು ಜನತೆಯಲ್ಲಿ ಅಚ್ಚೊತ್ತಿಸಲು ಸಾಹಿತ್ಯ ಪರಿಣಾಮಕಾರಿ ಮಾಧ್ಯಮ. ಅದರಲ್ಲೂ ಮಕ್ಕಳಲ್ಲಿ ಸಾಹಿತ್ಯದ ಅಭಿವ್ಯಕ್ತಿಯನ್ನು ಎಳೆಯದರಲ್ಲಿಯೇ ಚಿಗುರಿಸಿದರೆ ಆ ಮಗು ಆದರ್ಶ ನಾಗರಿಕನಾಗುವುದರಲ್ಲಿ ಸಂಶಯವಿಲ್ಲ ಎಂದರು.
    ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮದ ಜಿಲ್ಲಾ ಸಂಚಾಲಕಿ ಪ್ರಮೀಳಾ, ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ, ರಾಜ್ಯ ಸಂಪನ್ಮೂಲ ವ್ಯಕ್ತಿ ತನ್ವೀರ್, ಬಿಜಿವಿಎಸ್ ಜಿಲ್ಲಾಧ್ಯಕ್ಷ ಎಚ್.ಟಿ ಗುರುರಾಜು, ಕಲಾ ಶಿಕ್ಷಕ ಬಿ.ಎಸ್.ದೇಸಾಯಿ, ಕಲಾವಿದ ಗ್ಯಾರಂಟಿ ರಾಮಣ್ಣ, ಎವಿಕೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts