ದಾವಣಗೆರೆ: ಹೊರವಲಯದ ಯರಗುಂಟೆಯ ಶ್ರೀಗುರು ಕರಿಬಸವೇಶ್ವರ ಸ್ವಾಮಿ ಗದ್ದಿಗೆ ಮಠದಿಂದ ಶ್ರೀ ಗುರು ಕರಿಬಸವೇಶ್ವರ ಸ್ವಾಮಿಯ ದ್ವಾದಶ ಮಹೋತ್ಸವ ಹಾಗೂ ರಥೋತ್ಸವ ಡಿ.18ರಂದು ನೆರವೇರಲಿದೆ.
ಅಂದು ಬೆಳಗ್ಗೆ 10 ಗಂಟೆಗೆ ಉಜ್ಜಿನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ ಧರ್ಮ ಸಭೆ ನಡೆಯಲಿದೆ. ಮಧ್ಯಾಹ್ನ 12-45ಕ್ಕೆ ಮಹಿಳೆಯರೇ ಈ ವಿಶೇಷ ರಥ ಎಳೆಯಲಿದ್ದಾರೆ ಎಂದು ಶ್ರೀಗುರು ಕರಿಬಸವೇಶ್ವರ ಸ್ವಾಮಿ ಗದ್ದಿಗೆ ಮಠದ ಶ್ರೀ ಪರಮೇಶ್ವರ ಸ್ವಾಮೀಜಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಧರ್ಮಸಭೆಯಲ್ಲಿ ಮುಸ್ಟೂರಿನ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ತಾವರಕೆರೆಯ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿಯ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಬಸವಾಪಟ್ಟಣದ ಶ್ರೀ ಶಿವಕುಮಾರ ಸ್ವಾಮೀಜಿ, ಉಕ್ಕಡಗಾತ್ರಿಯ ಶ್ರೀ ಹಾಲಶಂಕರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸುವರು.
ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ.ಸಿದ್ದೇಶ್ವರ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸ್ಪಿ ಸಿ.ಬಿ.ರಿಷ್ಯಂತ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಪಾಲಿಕೆ ಸದಸ್ಯ ಉದಯಕುಮಾರ್, ಮಹಾಂತೇಶ್ ಶಾಸ್ತ್ರಿ, ಎನ್.ಎಸ್.ರಾಜು, ಸೈಯದ್ ರಹಮತ್ ಉಲ್ಲಾ, ಎಸ್.ಬಿ. ಖಾದ್ರಿ, ಸೈಯದ್ ಖಾದರ್ ಷಾ ಖಾದ್ರಿ ಇತರ ಗಣ್ಯರು ಪಾಲ್ಗೊಳ್ಳುವರು. ಬೆಳಗ್ಗೆ 6 ಗಂಟೆಗೆ ವೀರಭದ್ರಸ್ವಾಮಿ ಗುಗ್ಗಳ ನಡೆಯಲಿದೆ ಎಂದು ಹೇಳಿದರು.
ಡಿ.17ರಂದು ಬೆಳಗ್ಗೆ ವಿನಾಯಕ ಪೂಜೆ, ಧ್ವಜಾರೋಹಣ ನಡೆಯಲಿದೆ. ಮಹಾಗಣಪತಿ, ನವಗ್ರಹ, ಗೋ ಪೂಜೆ ಹಾಗೂ ರುದ್ರಹೋಮ ನೆರವೇರಲಿದೆ. ಮಧ್ಯಾಹ್ನ 12-45ಕ್ಕೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವಿದೆ. ರಾತ್ರಿ 8-30ಕ್ಕೆ ಅರಿಶಿಣದ ಎಣ್ಣೆ ಕಾರ್ಯಕ್ರಮ, ಕಳಸಾರೋಹಣವಿದೆ. ಮಹೇಶ್ವರ ಭಜನಾ ಸಂಘದಿಂದ ಭಜನೆ ಇದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಖಜಾಂಚಿ ಎ.ಸಿ.ಕರಿಬಸಪ್ಪ, ಟಿ.ಕೆ.ವಿನಾಯಕ, ಎಂ.ಮಂಜುನಾಥ, ಎನ್.ಎಸ್.ರಾಜು, ಎಂ.ಪಿ.ರಾಜೇಶ್ ಇದ್ದರು.
—–