ಬರಗೇನಹಳ್ಳಿ ಚಿಕ್ಕರಾಜು ದಾಬಸ್ಪೇಟೆ
ಈ ಬಾರಿ ಚಳಿ ತುಸು ಹೆಚ್ಚೇ ಇದೆ, ಬೆಳಗ್ಗೆ ಎಂಟು ಗಂಟೆಯಾದರೂ ರಸ್ತೆ ಕಾಣದಷ್ಟು ಮಂಜು ಬೀಳುತ್ತಿದ್ದು, ಜನ ಗಡಗಡ ನಡುಗುವಂತಾಗಿದೆ.
ದಾಬಸ್ಪೇಟೆ ಭಾಗದಲ್ಲಿ ಮೈ ಕೊರೆವ ಚಳಿ ಹೆಚ್ಚಾಗಿಯೇ ಇದೆ. ಬೆಳಗ್ಗೆ ಬೇಗನೆ ಎದ್ದು ಕೆಲಸ ಕಾರ್ಯಗಳಲ್ಲಿ ತೊಡಗುವವರ ಸಂಖ್ಯೆ ವಿರಳವಾಗಿದೆ. ನವೆಂಬರ್ನಿಂದ ಫೆಬ್ರವರಿವರೆಗೂ ಸಾಮಾನ್ಯವಾಗಿ ಚಳಿ ಇರುತ್ತದೆ. ಆದರೆ ಈ ಬಾರಿ ಚಳಿಯೊಂದಿಗೆ ಮಂಜೂ ಆವರಿಸುತ್ತಿದೆ. ಸಂಜೆ ವೇಳೆಗೆ ಕಾಣಿಸಿಕೊಳ್ಳುವ ಶೀತಗಾಳಿ ಬೆಳಗ್ಗೆವರೆಗೂ ಮೈ ನಡುಗಿಸುತ್ತಿದೆ. ಬೆಳಗ್ಗೆಯೇ ಅಂಗಡಿ ಬಾಗಿಲುಗಳನ್ನು ತೆರೆಯುವ ವ್ಯಾಪಾರಸ್ಥರು ಸೂರ್ಯನ ಕಿರಣಗಳಿಗಾಗಿ ಕಾದು ಕೂರುವಂತಾಗಿದೆ. ಹಾಲು, ದಿನಪತ್ರಿಕೆಯನ್ನು ಮನೆಮನೆಗಳಿಗೆ ತಲುಪಿಸುವವರು ಚಳಿಯಲ್ಲೇ ಸೈಕಲ್ ಏರುವುದು, ರೈತರು ನಿತ್ಯದ ಚಟುವಟಿಕೆಯಲ್ಲಿ ತೊಡಗುವುದು ಕಾಯಕವೇ ಕೈಲಾಸ ಎಂಬ ಮಾತನ್ನು ನೆನಪಿಸುತ್ತಿದೆ.
ಸಂಚಾರ ತುಸು ಕಷ್ಟ: ಹೆಚ್ಚಿನ ಪ್ರಮಾಣದಲ್ಲಿ ಮಂಜು ಬೀಳುತ್ತಿರುವುದರಿಂದ ವಾಹನ ಸಂಚಾರ ತುಸು ಕಷ್ಟವಾಗಿದೆ. ರಾಷ್ಟ್ರೀಯ ಹೆದ್ದಾರಿ 48 ಮತ್ತು ರಾಜ್ಯ ಹೆದ್ದಾರಿ 3ರಲ್ಲಿ ಸಂಚರಿಸುವ ಬಹುತೇಕ ವಾಹನಗಳು ಮಂದಗತಿಯಲ್ಲಿ ಸಾಗುವಂತಾಗಿದೆ. ಬೆಳಗ್ಗೆ 8 ಗಂಟೆಯಾದರೂ ವಾಹನಗಳ ಹೆಡ್ಲೈಟ್ ಬಳಕೆ ಅನಿವಾರ್ಯ ಎಂಬಂತಾಗಿದೆ.
ಸ್ವೆಟರ್, ಮಂಕಿಕ್ಯಾಪ್ಗೆ ಬೇಡಿಕೆ: ಚಳಿ ಹೆಚ್ಚಾದಂತೆ ಮಕ್ಕಳು, ವೃದ್ಧರು ಸ್ವೆಟರ್, ಮಪ್ಲರ್, ಮಂಕಿಕ್ಯಾಪ್ ಮೊರೆಹೋಗಿದ್ದಾರೆ. ಜತೆಗೆ ಅಲ್ಲಲ್ಲಿ ರಗ್ಗು, ಬೆಡ್ಶಿಟ್, ಮತ್ತಿತರ ಹೊದಿಕೆ ಸಾಮಗ್ರಿಗಳ ವ್ಯಾಪಾರವೂ ಹೆಚ್ಚಾಗಿದೆ.
ಚಾರಣಿರೂ ವಿರಳ: ಸೋಂಪುರ ಹೋಬಳಿಯಲ್ಲಿ ಬೆಟ್ಟಗಳ ಸಾಲು ಹೆಚ್ಚಾಗಿದೆ. ದಕ್ಷಿಣ ಕಾಶಿ ಶಿವಗಂಗೆ ಬೆಟ್ಟ, ಕೆಂಗಲ್ ಬೆಟ್ಟ, ಆಲದಹಳ್ಳಿ ಬೆಟ್ಟ, ಹೆಗ್ಗುಂದ ಬೆಟ್ಟ ಹಾಗೂ ಶ್ರೀ ರಾಮದೇವರ ಬೆಟ್ಟ ಸೇರಿ ಈ ಭಾಗದಲ್ಲಿ ಸಾಕಷ್ಟು ಬೆಟ್ಟಗಳಿದ್ದು, ಚಾರಣಿಗರ ಸಂಖ್ಯೆಯೂ ವಿರಳವಾಗಿದೆ.