More

    ಮೇ 2ರಿಂದ ಶ್ರೀ ಕೋದಂಡರಾಮ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

    ಮಡಿಕೇರಿ: ನಗರದಲ್ಲಿ ಶ್ರೀ ಕೋದಂಡರಾಮ ದೇವಾಲಯದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮೇ 2ರಿಂದ 4ರವರೆಗೆ ಎಂದು ದೇಗುಲ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಿ.ರಾಜೇಂದ್ರ ತಿಳಿಸಿದರು.
    ಕೊಡಗಿನಲ್ಲಿ ಹಲವು ರಾಮಮಂದಿರಗಳಿದ್ದರೂ ವಿಧ್ಯುಕ್ತವಾಗಿ ಪ್ರತಿಷ್ಠಾಪನೆಗೊಂಡಿರುವ ಶ್ರೀ ಸೀತಾ, ಲಕ್ಷ್ಮಣ, ಹನುಮಂತ ಸಹಿತ ಶ್ರೀಕೋದಂಡರಾಮ ದೇವಾಲಯ ಎಲ್ಲಿಯೂ ಇಲ್ಲ. ಶಬರಿಮಲೈನಲ್ಲಿ ಕನ್ನಿಮೂಲ ದಿಕ್ಕಿನಲ್ಲಿ ನೆಲೆ ನಿಂತಿರುವ ಮಹಾಗಣಪತಿಯಂತೆ ಮಡಿಕೇರಿಯಲ್ಲಿ ಕನ್ನಿಮೂಲ ದಿಕ್ಕಿನಲ್ಲಿ ಶ್ರೀ ಬಲಮುರಿ ಕ್ಷಿಪ್ರಪ್ರಸಾದ ಮಹಾಗಣಪತಿಯ ದೇಗುಲವೂ ನಿರ್ಮಾಣಗೊಂಡಿದ್ದು, ಪ್ರತಿಷ್ಠಾಪನೆಗೊಳ್ಳಲಿದೆ. ನವಗ್ರಹಗಳ ಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಮೇ 2 ರ ಸಂಜೆಯಿಂದ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿವೆ. ಮೇ 3 ರಂದು ಬೆಳಗ್ಗೆ 9 ಗಂಟೆಗೆ ಪ್ರಧಾನ ಕಳಸ ಸಹಿತ ಉತ್ಸವ ಮೂರ್ತಿ ಹೊತ್ತ ಮಂಟಪದೊಂದಿಗೆ ಧಾರ್ಮಿಕ ಮೆರವಣಿಗೆ ನಗರದ ಗಾಂಧಿ ಮೈದಾನದಿಂದ ಹೊರಡಲಿದೆ. ವಿವಿಧ ಕಲಾ ತಂಡಗಳು, ಚಂಡೆವಾದ್ಯ, ಭಜನಾ ತಂಡಗಳು, ಕಳಸ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ಮಧ್ಯಾಹ್ನ 1 ಗಂಟೆ ಬಳಿಕ ಅನ್ನಸಂತರ್ಪಣೆ ಇರಲಿದೆ. ಸಂಜೆ 5 ಗಂಟೆಯಿಂದ ದೇವಾಲಯ ಆವರಣದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ವಿವರಿಸಿದರು.
    ಮೇ 4ರಂದು ದೇವಾಲಯ ಆವರಣದಲ್ಲಿ ವಿವಿಧ ಹೋಮ ಹವನಾದಿ ವಿಧಿವಿಧಾನಗಳು ಬೆಳಗ್ಗೆ 6 ಗಂಟೆಗೆ ಪ್ರಾರಂಭಗೊಳ್ಳುತ್ತವೆ. ಬೆಳಗ್ಗೆ 7.45ರ ವೃಷಭ ಲಗ್ನದಲ್ಲಿ ಶ್ರೀೀ ದೇವರ ಪ್ರತಿಷ್ಠಾಪನೆ ಹಾಗೂ ಬೆಳಗ್ಗೆ 10.05ಕ್ಕೆ ಮಿಥುನ ಲಗ್ನದಲ್ಲಿ ಬ್ರಹ್ಮ ಕುಂಭಾಭಿಷೇಕ ಜರುಗಲಿದೆ. ಮಹಾಪೂಜೆ ಬಳಿಕ ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ರಿಂದ ದೇವಾಲಯ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
    ಕೋದಂಡರಾಮ ದೇವಾಲಯ ಟ್ರಸ್ಟ್ ಅಧ್ಯಕ್ಷ ಎಚ್.ಮಂಜುನಾಥ್ ಮಾತನಾಡಿ, 40 ವರ್ಷಗಳ ಹಿಂದೆ ದೇವಾಲಯ ನಿರ್ಮಿಸಿ ಕೆಳಭಾಗದಲ್ಲಿ ಕೋದಂಡರಾಮನನ್ನು ಪ್ರತಿಷ್ಠಾಪನೆಗೊಳಿಸಲಾಗಿತ್ತು. ಇದೀಗ ಜೀರ್ಣೋದ್ಧಾರದ ಮೂಲಕ ಮೇಲ್ಭಾಗಕ್ಕೆ ತರಲಾಗಿದೆ. ದೇವಾಲಯದಲ್ಲಿ ದಶಾವತಾರ, ಬ್ರಹ್ಮ-ಸರಸ್ವತಿ, ಶಿವ ಪರಿವಾರ, ಧನ್ವಂತರಿ, ದತ್ತಾತ್ರೇಯ, ಜಯವಿಜಯ, ಅಶ್ವಿನಿ ದೇವತೆಗಳು, ಶ್ರೀ ರಾಮ ಪಟ್ಟಾಭಿಷೇಕ ಹಾಗೂ ವಾಲ್ಮೀಕಿಯಿಂದ ಲವ-ಕುಶರಿಗೆ ರಾಮಾಯಣ ಪಠಣ ಇತ್ಯಾದಿ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಈಗ ಕೆಳಭಾಗದಲ್ಲಿ ಸಮುದಾಯ ಭವನವಿದ್ದು, ಅಲ್ಲಿ ಸ್ಥಳೀಯ ಕಾರ್ಯಕ್ರಮ ನಡೆಸಲು ಅವಕಾಶವಿರುತ್ತದೆ. ಸಮುದಾಯ ಭವನದ ಕೆಲಸ ಇನ್ನೂ ಪೂರ್ಣಗೊಳ್ಳಬೇಕಾಗಿದೆ ಎಂದು ಹೇಳಿದರು.
    ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಸ್.ಎಸ್.ಸಂಪತ್‌ಕುಮಾರ್ ಮಾತನಾಡಿ, ಈ ದೇವಾಲಯ ಭಕ್ತರ ಸಹಕಾರದಿಂದ ಟ್ರಸ್ಟ್ ಮೂಲಕ ನಿರ್ವಹಿಸಲ್ಪಡುತ್ತಿದೆ. ಕಳೆದ 50 ವರ್ಷಗಳಿಂದ ದೇವಾಲಯದ ಸಾನ್ನಿಧ್ಯ ಅಸ್ತಿತ್ವದಲ್ಲಿದೆ. ಆಗ ಭಜನಾ ಮಂದಿರವಿತ್ತು. ಶ್ರೀ ರಾಮನ ಚಿತ್ರಪಟಕ್ಕೆ ಪೂಜೆ ಮಾಡಲಾಗುತ್ತಿತ್ತು. ಕಾಲಕ್ರಮೇಣ ದೇವತಾ ಮೂರ್ತಿಗಳ ಪ್ರತಿಷ್ಠಾಪನೆ ನೆರವೇರಿಸಲಾಗಿದ್ದು, ಮಡಿಕೇರಿಯ ನಾಡಹಬ್ಬ ದಸರೆಯಲ್ಲೂ ಈ ದೇವಾಲಯದಿಂದ ಮಂಟಪವೊಂದು ಸಿದ್ಧಗೊಂಡು ಶೋಭಾಯಾತ್ರೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಪಾಲ್ಗೊಳ್ಳುತ್ತಿದೆ ಎಂದು ತಿಳಿಸಿದರು.
    ಸಮಿತಿ ಪ್ರಧಾನ ಕಾರ್ಯದರ್ಶಿ ನಂಜುಂಡ, ಸುಧಾಕರ್, ಗೋಪಿನಾಥ್ ಸುಬ್ಬರಾವ್, ಖಜಾಂಚಿ ಕುಶಾಲ್ , ಎಚ್.ಎನ್.ತಿಮ್ಮಯ್ಯ, ಉಪಾಧ್ಯಕ್ಷ ಕೆ.ಮಧುಕರ್ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts