ಚಿಕ್ಕಮಗಳೂರು: ಉತ್ತಮ ಸ್ತಬ್ಧಚಿತ್ರ ಸಿದ್ಧಪಡಿಸಿ ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಜಿಲ್ಲೆಯನ್ನು ಸಮರ್ಥವಾಗಿ ಪ್ರತಿನಿಧಿಸಬೇಕು ಎಂದು ಜಿಪಂ ಸಿಇಒ ಜಿ.ಪ್ರಭು ಸೂಚಿಸಿದರು.
ಮೈಸೂರು ದಸರಾ ಮಹೋತ್ಸವಕ್ಕೆ ಸ್ತಬ್ಧಚಿತ್ರ ಸಿದ್ಧಪಡಿಸುವ ಕುರಿತು ಜಿಪಂ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು. ಸ್ತಬ್ಧಚಿತ್ರಕ್ಕೆ ಮೂರು ಪರಿಕಲ್ಪನೆಗಳನ್ನು ಜಿಲ್ಲೆಯಿಂದ ಕಳಿಸಬೇಕಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಚಿತ್ರಣ ಹಾಗೂ ಮಹಾತ್ಮ ಗಾಂಧಿ ಅವರು ಭೇಟಿ ನೀಡಿದ್ದನ್ನು ವಸ್ತುವಾಗಿಟ್ಟುಕೊಂಡು ಮಾದರಿ ಕಳಿಸಲು ತಿಳಿಸಿದರು.
ಜಿಲ್ಲೆಯು ಸಪ್ತ ನದಿಗಳ ಉಗಮಸ್ಥಾನ. ಇಲ್ಲಿನ 7 ಪ್ರಮುಖ ನದಿಗಳು ರಾಜ್ಯದ ವಿವಿಧ ಭಾಗಗಳ ಜನರಿಗೆ ಆಸರೆಯಾಗಿರುವುದು ಹಾಗೂ ಜಿಲ್ಲೆಯ ಪರಿಸರ ಕಾಳಜಿ ವ್ಯಕ್ತಪಡಿಸುವಂತಹ ಮಾದರಿ ತಯಾರಿಸುವಂತೆ ಸಲಹೆ ನೀಡಿದರು. ಈ ಬಾರಿ ಹರ್ಷ ಕಾವಾ ಅವರಿಗೆ ಸ್ತಬ್ಧಚಿತ್ರ ರಚಿಸುವ ಜವಾಬ್ದಾರಿ ನೀಡಬೇಕು. ಎಲ್ಲ ಇಲಾಖೆಗಳು ಸಮನ್ವಯ ಸಾಧಿಸಿ ಸ್ತಬ್ಧಚಿತ್ರಕ್ಕೆ ತಗುಲುವ ವೆಚ್ಚ ಭರಿಸಬೇಕು ಎಂದರು.