ಹುಬ್ಬಳ್ಳಿ: ವಿವಿಧ ಇಲಾಖೆಗಳ ನಡುವಿನ ಸಮನ್ವಯತೆ ಕೊರತೆ ಅಭಿವೃದ್ಧಿ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದಕ್ಕೆ ಹುಬ್ಬಳ್ಳಿಯ ಕಮರಿಪೇಟೆ-ಉಣಕಲ್ ರಸ್ತೆ ಕಾಮಗಾರಿ ಉತ್ತಮ ನಿದರ್ಶನವಾಗಿದೆ.
2018ರ ಜನವರಿಯಲ್ಲಿ ಪ್ರಾರಂಭಗೊಂಡಿದ್ದ ಈ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಯು 2019ರ ಜನವರಿಯಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ಘಟಕ, ಮಹಾನಗರ ಪಾಲಿಕೆ, ಜಲಮಂಡಳಿ, ಹೆಸ್ಕಾಂ ಅಧಿಕಾರಿಗಳ ಮಧ್ಯದ ಸಮನ್ವಯತೆಯ ಕೊರತೆಯಿಂದಾಗಿ ಕಾಮಗಾರಿ ಇನ್ನೂ ಕುಂಟುತ್ತ ಸಾಗಿದೆ. ಕೇಂದ್ರೀಯ ರಸ್ತೆ ನಿಧಿ (ಸಿಆರ್ಎಫ್) ಅನುದಾನದ 25 ಕೋಟಿ ರೂ. ವೆಚ್ಚದಲ್ಲಿ ಅಂದಾಜು 4 ಕಿಮೀ ಉದ್ದದ ರಸ್ತೆ ನಿರ್ವಿುಸಲು ಮೂರೂವರೆ ವರ್ಷಗಳಾದರೂ ಸಾಧ್ಯವಾಗದಿರುವುದು ವಿವಿಧ ಇಲಾಖೆಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಗೋಕುಲ ರಸ್ತೆಯ ವಾಣಿ ವಿಲಾಸ ಜಂಕ್ಷನ್ ಬಳಿಯ ಕೆಲ ಮನೆಗಳನ್ನು ಸ್ಥಳಾಂತರಿಸುವ ಕಾರ್ಯವು ಮಹಾನಗರ ಪಾಲಿಕೆಯಿಂದ ಇನ್ನೂ ಆಗಿಲ್ಲ. ಪಾಲಿಕೆಯಿಂದ ಒಳಚರಂಡಿ ಪೈಪ್ಗಳನ್ನು ಸಹ ಸ್ಥಳಾಂತರಿಸಬೇಕಿದೆ. ಹೆಸ್ಕಾಂನಿಂದ ವಿದ್ಯುತ್ ಕಂಬ, ವಿದ್ಯುತ್ ತಂತಿಗಳನ್ನು, ಜಲಮಂಡಳಿಯಿಂದ ನೀರಿನ ಪೈಪ್ಗಳನ್ನು, ಅದಾನಿ ಕಂಪನಿಯವರು ಹಾಕಿರುವ ಗ್ಯಾಸ್ ಪೈಪ್ಗಳನ್ನು ಸ್ಥಳಾಂತರಿಸಬೇಕಿದೆ. ಕಮರಿಪೇಟೆಯಿಂದ ಹೊಸೂರು ಸೇರುವ ರಸ್ತೆಯವರೆಗೆ ಈ ಸೌಲಭ್ಯಗಳ ಸ್ಥಳಾಂತರವಾಗಿದೆ. ಆದರೆ, ವಾಣಿ ವಿಲಾಸ ರಸ್ತೆಯಿಂದ ಶಿರೂರ ಪಾರ್ಕ್ ಸೇರುವ ರಸ್ತೆಯಲ್ಲಿ ಈ ಸೌಲಭ್ಯಗಳ ಸ್ಥಳಾಂತರ ಇನ್ನೂ ಆಗಿಲ್ಲ. ಈ ಮಧ್ಯೆ 3.4 ಕಿಮೀವರೆಗೆ ಸಿಮೆಂಟ್ ರಸ್ತೆ ನಿರ್ವಿುಸಿರುವ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ಘಟಕ, ಸೌಲಭ್ಯಗಳನ್ನು ಸ್ಥಳಾಂತರಿಸುವ ಸ್ಥಳದಲ್ಲಿ ಕಾಮಗಾರಿಯನ್ನು ಹಾಗೆಯೇ ಉಳಿಸಿದೆ.
ರಸ್ತೆ ನಿರ್ವಿುಸುತ್ತಿರುವ ಗುತ್ತಿಗೆದಾರರಿಗೂ ಸರಿಯಾಗಿ ಹಣ ಸಂದಾಯ ಮಾಡದಿರುವುದು ಸಹ ಕಾಮಗಾರಿ ವಿಳಂಬಗೊಳ್ಳಲು ಮತ್ತೊಂದು ಪ್ರಮುಖ ಕಾರಣ. ಈ ರಸ್ತೆಯಲ್ಲಿ ಏಷಿಯಾದಲ್ಲಿಯೇ ಮಾದರಿಯಾದ ತಾಲೂಕು ಮಟ್ಟದ ಬೃಹತ್ ಕೋರ್ಟ್ ಕಟ್ಟಡ ನಿರ್ವಣವಾಗಿದೆ. ಆದರೆ, ಈ ಮಾರ್ಗದ ಅರೆಬರೆ ಕಾಮಗಾರಿಯಿಂದಾಗಿ ಕೋರ್ಟ್ಗೆ ಬರುವ ವಕೀಲರು, ಕಕ್ಷಿದಾರರು ಪರದಾಡುವಂತಾಗಿದೆ. ಕಮರಿಪೇಟೆಯಿಂದ ನೇರವಾಗಿ ಧಾರವಾಡಕ್ಕೆ ತೆರಳುವವರು, ಶಾಲೆ-ಕಾಲೇಜುಗಳಿಗೆ ಹೋಗುವವರು ಈ ರಸ್ತೆ ಮೂಲಕವೇ ಸಂಚರಿಸುತ್ತಿದ್ದರು. ಇವರೆಲ್ಲ ಕಳೆದ ಮೂರೂವರೆ ವರ್ಷಗಳಿಂದ ಈ ಮಾರ್ಗದ ಮೂಲಕ ಸರಳವಾಗಿ ಸಂಚರಿಸಲು ಸಾಧ್ಯವಾಗದಾಗಿದೆ.
ಗುತ್ತಿಗೆದಾರರಿಗೆ ಹಣ ಪಾವತಿ ಆಗದ ಕಾರಣ ಕಾಮಗಾರಿ ವಿಳಂಬ ಆಗಿದೆ. ಹಣ ಪಾವತಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಗುತ್ತಿಗೆದಾರರಿಗೆ ಹಣ ಪಾವತಿಯಾದ ತಕ್ಷಣ ಬಾಕಿ ಇರುವ ವಿವಿಧ ಸೌಲಭ್ಯಗಳನ್ನು ಸ್ಥಳಾಂತರಿಸಿ, ಕಾಮಗಾರಿಗೆ ವೇಗ ನೀಡಲಾಗುವುದು.
| ಜಗದೀಶ ಶೆಟ್ಟರ್ ಜಿಲ್ಲಾ ಉಸ್ತುವಾರಿ ಸಚಿವಸೌಲಭ್ಯಗಳ ಸ್ಥಳಾಂತರದಲ್ಲಿ ಆಗಿರುವ ಅಡಚಣೆಯಿಂದಾಗಿ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲ. ಸೌಲಭ್ಯಗಳ ಸ್ಥಳಾಂತರ ಇಲ್ಲದ ಸ್ಥಳದಲ್ಲಿ ಇನ್ನೂ ಅಂದಾಜು 500-600 ಮೀಟರ್ನಷ್ಟು ಉದ್ದದ ಮಾರ್ಗದಲ್ಲಿ ಸಿಮೆಂಟ್ ರಸ್ತೆ ನಿರ್ವಿುಸಬೇಕಿದೆ.
| ರಮೇಶ ಹವಳೆ ಪಿಡಬ್ಲ್ಯುಡಿ ಎನ್ಎಚ್ ಘಟಕದ ಸಹಾಯಕ ಇಂಜಿನಿಯರ್, ಹುಬ್ಬಳ್ಳಿ