ಮುಳಗುಂದ: ಪಟ್ಟಣದ ಬಯಲು ಬಸವೇಶ್ವರನಗರದಲ್ಲಿ ಮನೆಗಳು ನಿರ್ವಣವಾಗಿ ಒಂದೂವರೆ ದಶಕ ಕಳೆದರೂ ಈವರೆಗೂ ಮೂಲಸೌಲಭ್ಯ ಮರೀಚಿಕೆಯಾಗಿದೆ. ನಗರದ ಬಹುತೇಕ ರಸ್ತೆಗಳು ಈವರೆಗೂ ಡಾಂಬರ್ ಕಂಡಿಲ್ಲ.
ಈ ಪ್ರದೇಶದಲ್ಲಿ 380ಕ್ಕೂ ಹೆಚ್ಚು ಮನೆಗಳಿದ್ದು, ಮನೆಗಳ ಸುತ್ತಮುತ್ತ ಹುಲ್ಲು, ಮುಳ್ಳು-ಕಂಟಿಗಳು ಬೆಳೆದಿವೆ. ಇಲ್ಲಿ ರಸ್ತೆ ಯಾವುದು ಎಂಬುದೇ ಗೊತ್ತಾಗುವುದಿಲ್ಲ. ವಿಷಜಂತುಗಳ ಹಾವಳಿ ಹೆಚ್ಚಾಗಿದ್ದರಿಂದ ಜನರು ಸಂಚರಿಸಲು ಭಯ ಪಡುವಂತಹ ಸ್ಥಿತಿ ನಿರ್ವಣವಾಗಿದೆ. ರಸ್ತೆಗಳ ಅಕ್ಕಪಕ್ಕದಲ್ಲಿ ಚರಂಡಿಗಳಿಲ್ಲದೆ, ಎಲ್ಲ ಮನೆಗಳ ಶೌಚಗೃಹದ ನೀರು ರಸ್ತೆಯ ಮೇಲೆ ಹರಿಯುತ್ತವೆ.
ಈ ಕುರಿತು ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಪಪಂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಅಧಿಕಾರಿಗಳು ಇಲ್ಲಿರುವ ಅವ್ಯವಸ್ಥೆಯತ್ತ ಸ್ವಲ್ಪ ಗಮನ ಹರಿಸಬೇಕು. ರಸ್ತೆಗಳಲ್ಲಿ ಹುಲ್ಲು, ಮುಳ್ಳು-ಕಂಟಿ ಬೆಳೆದು ಹಾವು, ಚೇಳುಗಳ ಆಗರವಾಗಿವೆ. ಈ ರಸ್ತೆಗಳಲ್ಲಿ ಸಂಚರಿಸುವುದಾದರೂ ಹೇಗೆ?
| ಮೈಲಾರಪ್ಪ ಭಂಗಿ ಬಯಲು ಬಸವೇಶ್ವರ ನಿವಾಸಿ
ಸದ್ಯ ಜೆಸಿಬಿ ರಿಪೇರಿ ಇದ್ದ ಕಾರಣ ರಸ್ತೆ ದುರಸ್ತಿ ಮಾಡಿಸಿಲ್ಲ. ಜೆಸಿಬಿ ಬಂದ ತಕ್ಷಣ ರಸ್ತೆಯಲ್ಲಿ ಬೆಳೆದಿರುವ ಹುಲ್ಲು ಹಾಗೂ ಕಂಟಿಗಳನ್ನು ತೆಗೆಯಿಸಿ ದುರಸ್ತಿ ಮಾಡಿಸಲಾಗುವುದು.
| ಎಂ.ಎಸ್. ಬೆಂತೂರ, ಪಪಂ ಮುಖ್ಯಾಧಿಕಾರಿ, ಮುಳಗುಂದ