ಭಟ್ಕಳ: ಪಟ್ಟಣದ ಹಳೇ ಬಸ್ ನಿಲ್ದಾಣಕ್ಕೆ ಹೊಂದಿಕೊಂಡ ಮೀನು ಮಾರುಕಟ್ಟೆಯನ್ನು ಸಂತೆ ಮಾರುಕಟ್ಟೆ ಪಕ್ಕದ ನೂತನ ಕಟ್ಟಡಕ್ಕೆ ಸ್ಥಳಾಂತರಿಸುವ ಕುರಿತು ಪುರಸಭೆ ಕಚೇರಿಯಲ್ಲಿ ಶಾಸಕ ಸುನೀಲ ನಾಯ್ಕ ನೇತೃತ್ವದಲ್ಲಿ ಸೋಮವಾರ ಜರುಗಿದ ಸಭೆಯಲ್ಲಿ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ.
ಸಭೆಯಲ್ಲಿ ಕೃಷ್ಣ ನಾಯ್ಕ ಆಸರಕೇರಿ ಮಾತನಾಡಿ, ಈಗಾಗಲೇ ಹಳೇ ಬಸ್ ನಿಲ್ದಾಣಕ್ಕೆ ಹೊಂದಿಕೊಂಡು ಚಿಕನ್, ತರಕಾರಿ, ಕಿರಾಣಿ ಅಂಗಡಿಗಳು ವ್ಯಾಪಾರ- ವಹಿವಾಟು ನಡೆಸುತ್ತೀವೆ. ಮೀನು ಮಾರುಕಟ್ಟೆ ಅವಲಂಬಿಸಿಕೊಂಡೇ ಹಲವು ಜನರು ಪುರಸಭೆ ವ್ಯಾಪ್ತಿಯಲ್ಲಿ ಅಂಗಡಿ- ಮಳಿಗೆಗಳನ್ನು ಗರಿಷ್ಠ ಬಾಡಿಗೆ ಪಡೆದಿದ್ದಾರೆ. ಹೀಗಿರುವಾಗ ಮೀನು ಮಾರುಕಟ್ಟೆ ಸ್ಥಳಾಂತರಿಸಿದರೆ ಇವರೆಲ್ಲರೂ ಜೀವನ ನಡೆಸುವುದು ಕಷ್ಟವಾಗಲಿದೆ ಎಂದರು.
ನೂತನ ಮೀನು ಮೀನು ಮಾರುಕಟ್ಟೆ ಜನ ಓಡಾಡದ ಪ್ರದೇಶದಲ್ಲಿದೆ. ಮೀನುಗಾರ ಮಹಿಳೆಯರು ಹಾಗೂ ಗ್ರಾಹಕರಿಗೆ ಹೆದ್ದಾರಿಯನ್ನು ದಾಟಿ ಮಾರುಕಟ್ಟೆ ತಲುಪಲು ಕಷ್ಟವಾಗುತ್ತದೆ. ಆದ್ದರಿಂದ ಈಗ ಇದ್ದ ಸ್ಥಳದಲ್ಲಿಯೇ ಮೀನು ಮಾರುಕಟ್ಟೆ ಮುಂದುವರಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ವೆಂಕಟೇಶ ನಾಯ್ಕ ಆಸರಕೇರಿ, ಪುರಸಭೆ ಸದಸ್ಯ ಮೋಹನ ನಾಯ್ಕ ದನಿಗೂಡಿಸಿದರು.
ಮೀನುಗಾರ ಮಹಿಳೆಯರು ಮಾತನಾಡಿ, ನಮಗೆ ಹೊಸ ಮೀನು ಮಾರುಕಟ್ಟೆ ಅವಶ್ಯಕತೆ ಇಲ್ಲ. ಈಗ ಇರುವ ಸ್ಥಳದಲ್ಲಿ ಮೂಲಸೌಕರ್ಯ ಕಲ್ಪಿಸಿ, ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಬೇಕು. ನೂತನ ಮೀನು ಮಾರುಕಟ್ಟೆಯನ್ನು ಇಲ್ಲಿನ ಜನರ ಅಭಿಪ್ರಾಯ ಕೇಳದೇ ನಿರ್ವಿುಸಲಾಗಿದೆ ಎಂದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಭರತ್ ಎಸ್. ಇತರರು ಇದ್ದರು.
ಸಾರ್ವಜನಿಕರ, ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಲಾಗುವುದು. ಈ ಕುರಿತು ರ್ಚಚಿಸಿ ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು.
ಭರತ ಎಸ್. ಉಪವಿಭಾಗಾಧಿಕಾರಿ ಭಟ್ಕಳಮೀನು ಮಾರುಕಟ್ಟೆ ಸ್ಥಳಾಂತರ ಪ್ರಕ್ರಿಯೆ ಕುರಿತು ಜನರ ಅಭಿಪ್ರಾಯವನ್ನು ಸಮಗ್ರವಾಗಿ ಪರಿಗಣಿಸಲಾಗುವುದು. ಮೀನುಗಾರ ಮಹಿಳೆಯರನ್ನು ವಿಶ್ವಾಸಕ್ಕೆ ಪಡೆದು ನಿರ್ಣಯ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ.
| ಸುನೀಲ ನಾಯ್ಕ ಶಾಸಕ