ಬ್ಯಾಡಗಿ: ತಾಲೂಕಿನ ಮಾಸಣಗಿಯ ಪಿಡಿಒ ಅವರನ್ನು ಕೂಡಲೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಶನಿವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಎಪಿಎಂಸಿ ಸದಸ್ಯ ಶಿವಪ್ಪ ಕುಮ್ಮೂರು ಮಾತನಾಡಿ, ‘ಹತ್ತಾರು ವರ್ಷಗಳಿಂದ ಗ್ರಾಮ ಪಂಚಾಯಿತಿಯಲ್ಲಿ ಕಾಯಂ ಉಳಿದುಕೊಂಡ ಅಧಿಕಾರಿಗಳು ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ. ಕಾಮಗಾರಿಗಳಿಗೆ ಬಿಲ್ ನೀಡಲು ಸತಾಯಿಸುವ ಮೂಲಕ ಹಣ ಕೇಳುತ್ತಿದ್ದಾರೆ ಎಂಬ ಆರೋಪವಿದೆ. ರಾಜಕಾರಣಿಗಳ ಬೆಂಬಲದಿಂದ ಹಲವು ವರ್ಷಗಳಿಂದ ಇಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮದ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಬೇಸರ ಮೂಡಿಸಿದೆ’ ಎಂದರು.
ಗ್ರಾಮಸ್ಥ ಮುನಾಫ್ ಮಾಳಗಿಮನಿ ಮಾತನಾಡಿ, ಇ-ಸ್ವತ್ತು ಉತಾರ ನೀಡಲು ಪಿಡಿಒ ಗ್ರಾಮಸ್ಥರಿಂದ ಲಂಚ ಕೇಳುತ್ತಿದ್ದಾರೆ ಎಂದು ದೂರಿದರು.
ತಾಪಂ ವ್ಯವಸ್ಥಾಪಕ ಪ್ರಕಾಶ ಹಿರೇಮಠ ಮಾತನಾಡಿ, ‘ಪಿಡಿಒ ಮೇಲಿನ ಆರೋಪಗಳನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಇಲಾಖೆ ನಿಯಮದಂತೆ ಅವರನ್ನು ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಲಾಗುವುದು’ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಕಾರ್ಯಾಲಯದ ಬೀಗ ತೆಗೆದರು. ಬಸವರಾಜ ಕುಮ್ಮೂರು, ಬಸನಗೌಡ ಸಣ್ಣಗೌಡ್ರ, ಉಳೆವೆಪ್ಪ ಬನ್ನಿಹಟ್ಟಿ, ಚನ್ನಬಸಪ್ಪ ವೀರನಗೌಡ್ರ, ನಾಗರಾಜ ಕೂರ್ಲಿ, ಪ್ರಕಾಶ ಕುಮ್ಮೂರು ಇತರರಿದ್ದರು.