More

    ಮಾರಿ ಜಾತ್ರೆ ಮಹೋತ್ಸವ ಸಂಪನ್ನ

    ವಿಜಯವಾಣಿ ಸುದ್ದಿಜಾಲ ಶಿರಸಿ: ಕಾದು ನಿಂತ ಜನತೆ, ಶ್ರೀಮಾರಿಕಾಂಬಾ ಮಾತಾ ಕೀ ಜೈ ಎಂಬ ಘೊಷ… ಸುಮಾರು ಮೂರು ತಾಸುಗಳ ವಿಧಿವಿಧಾನಗಳು.. ಇವೆಲ್ಲದರ ಮಧ್ಯೆ ಶಕ್ತಿಸ್ವರೂಪಿಣಿ ಶ್ರೀಮಾರಿಕಾಂಬೆ ಜಾತ್ರಾ ಗದ್ದುಗೆಯಿಂದ ಬುಧವಾರ ತೆರಳಿದಳು. ಈ ಮೂಲಕ ಒಂಬತ್ತು ದಿನಗಳ ಕಾಲ ಅದ್ದೂರಿಯಿಂದ ಜರುಗಿದ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.

    ದಕ್ಷಿಣ ಭಾರತದಲ್ಲಿ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಮಾರಿಕಾಂಬೆ ಜಾತ್ರೆಯ ಅಂತಿಮ ದಿನವಾದ ಬುಧವಾರ ಬೆಳಗ್ಗೆ 5ರಿಂದ 10.30ರವರೆಗೆ ಹರಕೆ ಸೇವೆಗಳು ನಡೆದವು. ನಂತರ ಮಹಾಮಂಗಳಾರತಿ ನಡೆಸುವ ಮೂಲಕ ಸೇವಾಕಾರ್ಯವನ್ನು ಸಂಪನ್ನಗೊಳಿಸಲಾಯಿತು. 11 ಗಂಟೆ ಸುಮಾರಿಗೆ ದೇವಿ ಜಾತ್ರಾ ಗದ್ದುಗೆಯಿಂದ ಮೇಲೆಳುವ ಶಾಸ್ತ್ರ ನಡೆಸಲಾಯಿತು. ನಂತರ ದೇವಸ್ಥಾನದ ಆಡಳಿತ ಮಂಡಳಿಯವರು, ಬಾಬದಾರರು, ಸಹಾಯಕರೆಲ್ಲ ಸೇರಿ ದೇವಸ್ಥಾನದ ಕಲ್ಯಾಣ ಮಂಟಪಕ್ಕೆ ತೆರಳಿದರು.

    ಅಲ್ಲಿ ಕಳೆದ ಒಂಬತ್ತು ದಿನಗಳಿಂದ ಸಂಪ್ರದಾಯದಂತೆ ಕಲಶವಿಟ್ಟು ಪೂಜೆ ಸಲ್ಲಿಸುತ್ತಿರುವ ಗಾಳಿಮಾಸ್ತಿ ಜೋಗತಿಯರು ಇವರಿಗೆಲ್ಲ ಕಂಕಣ ಕಟ್ಟಿದರು. ನಂತರ ವಾದ್ಯತಂಡದೊಂದಿಗೆ ಪೂಜೆ ನಡೆಸಿದ ಕುಂಭವನ್ನು ಮೆರವಣಿಗೆಯಲ್ಲಿ ಗದ್ದುಗೆಗೆ ತರಲಾಯಿತು. ಅದನ್ನು ಗದ್ದುಗೆಗೆ ಕಟ್ಟಿದ ನಂತರ ದೇವಿಯನ್ನು ಗದ್ದುಗೆಯಿಂದ ಜಾತ್ರಾ ಮಂಟಪದ ಮಧ್ಯದಲ್ಲಿರುವ ರಂಗಮಂಟಪದಲ್ಲಿ ತಂದು ಕುಳ್ಳಿರಿಸಲಾಯಿತು. ಜಾತ್ರೆಯಲ್ಲಿ ಕೋಣನ ಬಲಿ ಕೊಡುವ ಸಂಪ್ರದಾಯ ಕೈಬಿಟ್ಟ ಕಾರಣ ಜಾತ್ರಾ ಚಪ್ಪರದ ಎದುರು ಹೊಂಡ ತೋಡಿ ಸಾಂಕೇತಿಕವಾಗಿ ಕುಂಬಳಕಾಯಿ ಬಲಿ ಸಮರ್ಪಣೆ ನಡೆಸಿ ಮುಚ್ಚಲಾಯಿತು. ಈ ಸಂದರ್ಭದಲ್ಲಿ ಜಾತ್ರೆಗೆ ವಾರ ಮೊದಲು ನಡೆದಿದ್ದ ಅಂಕೆ ಹಾಕುವ, ಕಂಕಣ ಕಟ್ಟುವ ಕಾರ್ಯ ದಿನದಂದು ದೇವಿಗೆ ಆರತಿ ಮಾಡಿದ ಮೇಟಿ ದೀಪವನ್ನು ಆರದಂತೆ ನೋಡಿಕೊಂಡ ಅಸಾದಿ ಬಸವಣ್ಣಿ ಈ ದೀಪದಿಂದ ಮಾರಿಕಾಂಬೆಗೆ ಮಂಗಳಾರತಿ ನಡೆಸಿದರು. ಹೀಗೆ ಜಾತ್ರೆಯ ಮುಕ್ತಾಯ ವಿಧಿವಿಧಾನಗಳ ನಂತರ ಮಧ್ಯಾಹ್ನ 1 ಗಂಟೆ ಸುಮಾರಿಗೆ ದೇವಿಯನ್ನು ಹೊತ್ತುಕೊಂಡು ತೆರಳಲಾಯಿತು.

    ಸಹಸ್ರ ಸಂಖ್ಯೆಯ ಜನರ ನಡುವೆ ಹೊರಟ ಮಾರಿಕಾಂಬೆ ಜಾತ್ರಾ ಮಂಟಪದಿಂದ ಹೊರಬಿದ್ದು ರಥದ ಬಳಿ ಹೋದ ನಂತರ ರಥವನ್ನು ನೋಡುವ ಭಾಗವಾಗಿ ಮುಖ ತಿರುಗಿ ನಂತರ ಪುನಃ ಮೆರವಣಿಗೆಯಲ್ಲಿ ಹೊತ್ತುಕೊಂಡು ದೇವಿಯನ್ನು ಬನವಾಸಿ ರಸ್ತೆಯ ವಿಸರ್ಜನಾ ಪೀಠಕ್ಕೆ ಕೊಂಡೊಯ್ಯಲಾಯಿತು.

    ಮಾತಂಗಿ ಚಪ್ಪರಕ್ಕೆ ಬೆಂಕಿ: ದೇವಿ ಗದ್ದುಗೆಯಿಂದ ತೆರಳುವ ಸಂದರ್ಭದಲ್ಲಿ ಜಾತ್ರಾ ಮಂಟಪದ ಆವಾರದ ಮುಖ್ಯ ದ್ವಾರದ ಅಂಚಿನಲ್ಲಿ ಹಾಕಲಾದ ಸೊಗೆ ಚಪ್ಪರವನ್ನು ಸುಡಲಾಗುತ್ತದೆ. ವಿವಿಧ ರೀತಿಯ ಸಮಸ್ಯೆಗಳ ನಿವಾರಣೆಗೆ ಹರಕೆ ಹೊತ್ತು ಜಾತ್ರೆಯ ಸಂದರ್ಭದಲ್ಲಿ ಬೇವಿನ ಉಡುಗೆ ತೊಟ್ಟು ಬಂದ ಭಕ್ತರು ಈ ಚಪ್ಪರದಲ್ಲಿ ಇದನ್ನು ಬಿಚ್ಚಿ ಹಾಕಿರುತ್ತಾರೆ. ಹೀಗೆ ರಾಶಿಯಾಗಿದ್ದ ಬೇವಿನ ಸೊಪ್ಪಿರುವ ಚಪ್ಪರವನ್ನು ದೇವಿ ಹೊರ ಹೋಗುತ್ತಲೇ ಬೆಂಕಿ ಹಚ್ಚಲಾಯಿತು. ಈ ಮೂಲಕ ಭಕ್ತ ಸಂಕಷ್ಟವನ್ನು ಬೂದಿ ಮಾಡುವ ನಂಬಿಕೆ ಇದರಲ್ಲಿ ಅಡಗಿದೆ. ನಂತರ ಅಗ್ನಿಶಾಮಕ ದಳದವರು ಇದನ್ನು ನಂದಿಸಿದರು.

    ಸುಡುಬಿಸಿಲ ನಡುವೆ: ದೇವಿ ಜಾತ್ರಾ ಗದ್ದುಗೆ ಬಿಟ್ಟು ಮಂಟಪದ ಮಧ್ಯದಲ್ಲಿ ಕುಳಿತುಕೊಳ್ಳುವ ವೇಳೆಗೆ ಬಿಸಿಲು ನೆತ್ತಿಗೇರಿತ್ತು. ತಾಯಿ ತೆರಳುವುದನ್ನು ವೀಕ್ಷಿಸಲು ಸೇರಿದ್ದ ಅಪಾರ ಭಕ್ತ ಜನಸ್ತೋಮ ಇದನ್ನು ಲೆಕ್ಕಿಸದೆ ಕಾದು ನಿಂತಿದ್ದರು. ಸುಮಾರು ಮೂರು ತಾಸು ಕಾಲ ಭಕ್ತಿಭಾವದಿಂದ ನಿಂತರು. ಮರಣ ಬಾವಿ, ಅಂಚಿನ ಕಟ್ಟಡ, ರಸ್ತೆಯ ಅಂಚಿನಲ್ಲಿ ಹೀಗೆ ಎಲ್ಲಿ ನೋಡಿದರಲ್ಲಿ ಜನವೋ ಜನ. ದೇವಿ ಹೊರಡುತ್ತಿದ್ದಂತೆ ಜಯಘೊಷ ಮೊಳಗಿಸಿದರು. ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.

    ಯುಗಾದಿಗೆ ಪ್ರತಿಷ್ಠಾಪನೆ: ಬನವಾಸಿ ರಸ್ತೆಯ ವಿಸರ್ಜನಾ ಪೀಠಕ್ಕೆ ತೆರಳಿನಂತರ ದೇವಿಯ ವಿಗ್ರಹ ವಿಸರ್ಜನೆಯ ಭಾಗವಾಗಿ ಮಂಗಳ ಸೂತ್ರ ತೆಗೆಯುವುದು, ಆಭರಣಗಳನ್ನು ತೆಗೆಯುವುದು, ವಿಗ್ರಹದ ಅವಯವಗಳನ್ನು ದೇವಿಯ ದೇವಸ್ಥಾನಕ್ಕೆ ಮರಳಿ ತರುವುದು. ಹೀಗೆ ಮುಕ್ತಾಯದ ವಿಧಿ-ವಿಧಾನಗಳು ನಡೆದವು. ಯುಗಾದಿಯ ದಿನದಂದು ಮಾರಿಕಾಂಬೆಯನ್ನು ದೇಗುಲದ ಗರ್ಭಗುಡಿಯಲ್ಲಿ ಪುನಃ ಪ್ರತಿಷ್ಠಾಪಿಸಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts