ಬೀರೂರು: ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಅನೇಕ ಸಾಲ ಸೌಲಭ್ಯ ಯೋಜನೆಗಳನ್ನು ಜಾರಿಗೊಳಿಸಿ ಕೃಷಿಯನ್ನು ಪ್ರೋತ್ಸಾಹಿಸುತ್ತಿದೆ. ಆಧುನಿಕ ತಂತ್ರಜ್ಞಾನ ಸಮರ್ಪಕ ಬಳಕೆಗೂ ತರಬೇತಿ ನೀಡುತ್ತಿದೆ ಎಂದು ಶಾಸಕ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ತಿಳಿಸಿದರು.
ಬಾಸೂರು ಶ್ರೀ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಭಾನುವಾರ ಎಸ್ಬಿಐ ಬೀರೂರು ಶಾಖೆ ಆಯೋಜಿಸಿದ್ದ ರೈತರ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ರಿಯಾಯಿತಿ ದರದಲ್ಲಿ ಯಂತ್ರೋಪಕರಣ, ಸಾಲಕ್ಕೆ ಕಡಿಮೆ ಬಡ್ಡಿ, ಪ್ರಕೃತಿ ವಿಕೋಪದಿಂದ ಹಾನಿಯಾಗಿದ್ದಲ್ಲಿ ಬೆಳೆ ವಿಮೆ ನೀಡಿ ರೈತರಿಗೆ ಬೆನ್ನೆಲುಬಾಗಿ ನಿಂತಿದೆ ಎಂದರು.
ಕೃಷಿ ಹಾಗೂ ಇನ್ನಿತರ ಚಟುವಟಿಕೆಗೆ ರೈತ ಪಡೆದಿರುವ ಸಾಲವನ್ನು ವಸೂಲಿ ಮಾಡುವಾಗ ಅವರ ಮಾನ, ಪ್ರಾಣಕ್ಕೆ ಧಕ್ಕೆಯಾಗದಂತೆ ಬ್ಯಾಂಕ್ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಅವರೊಡನೆ ಮಾನವೀಯತೆಯಿಂದ ವರ್ತಿಸಬೇಕು ಎಂದು ಸೂಚಿಸಿದರು.
ಮಂಗಳೂರು ಎಸ್ಬಿಐ ಉಪಪ್ರಧಾನ ಕಚೇರಿ ವ್ಯವಸ್ಥಾಪಕ ಜೋಬಿ ಜೋಸ್ ಮಾತನಾಡಿ, ಕೃಷಿಕರು ಬ್ಯಾಂಕ್ಗಳಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕೃಷಿ ಚಟುವಟಿಕೆಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲ, ಜಮೀನು ಅಭಿವೃದ್ಧಿಗೆ ಸಾಲ ಮತ್ತು ಗ್ರಾಮೀಣ ಭಾಗಕ್ಕೆ ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ ಸಹಾಯಧನ ನೀಡುವುದಾಗಿ ಭರವಸೆ ನೀಡಿದರು.