More

    ಮಾನಸಿಕ ಒತ್ತಡದಿಂದ ಕಾಯಿಲೆ

    ಧಾರವಾಡ: ಯುವ ಸಮುದಾಯದಲ್ಲಿ ತಾತ್ಕಾಲಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸೂಚಿಸುವುದನ್ನು ಪಾಲಕರು, ಶಿಕ್ಷಕರು ಮತ್ತು ಸಮಾಜದ ಸಂಘ-ಸಂಸ್ಥೆಗಳು ವಯಸ್ಸಿನ ಅನುಗುಣವಾಗಿ ಮಾಡದಿರುವುದೇ ಆತ್ಮಹತ್ಯೆ ಪ್ರಕರಣಗಳು ಹೆಚ್ಚಲು ಕಾರಣ ಎಂದು ಡಾ. ಆನಂದ ಪಾಂಡುರಂಗಿ ಹೇಳಿದರು.

    ವಿಶ್ವ ಆತ್ಮಹತ್ಯೆ ನಿಯಂತ್ರಣಾ ದಿನ ನಿಮಿತ್ತ ಇಲ್ಲಿನ ಮಾಳಮಡ್ಡಿ ಶ್ರೀ ವನವಾಸಿ ರಾಮಂದಿರದ ವೆಂಕಟದಾಸ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಯುವ ಮನಸ್ಸುಗಳ ನಿಯಂತ್ರಣ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮಾನಸಿಕ ಅನಾರೋಗ್ಯ ಪ್ರಸ್ತುತದಲ್ಲಿ ಹೆಚ್ಚಿದೆ. ಈ ಸಮಸ್ಯೆ ನಿವಾರಿಸಲು ಮನಸ್ಸಿನ ಶಾಂತಿ, ನೆಮ್ಮದಿಗೆ ಮಹತ್ವ ನೀಡಲಾಗುತ್ತದೆ. ಮಾನಸಿಕ ಒತ್ತಡ ಮತ್ತು ಆತಂಕ ಅನೇಕ ಕಾಯಿಲೆಗಳಿಗೆ ದಾರಿ. ಹೀಗಾಗಿ ಮನಸ್ಸಿನಲ್ಲಿ ಚಿಂತೆ, ಕಳವಳಕ್ಕೆ ಆಸ್ಪದ ನೀಡದೆ ಶಾಂತ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದನ್ನು ಕಲಿಯಬೇಕಿದೆ. ಎಲ್ಲ ಮಕ್ಕಳೂ ಒಳ್ಳೆಯವರು ಆದರೆ, ಸನ್ನಿವೇಶ ಅವರನ್ನು ಆತ್ಮಹತ್ಯೆ, ಖಿನ್ನತೆ, ದುಶ್ಚಟಗಳಿಗೆ ಎಳಸುವಂತೆ ಮಾಡುತ್ತವೆ ಎಂದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಮಾತನಾಡಿ, ಉದ್ವೇಗ, ಖಿನ್ನತೆ ಮನಸ್ಸಿಗೆ ಆವರಿಸಿದರೆ ಅದರಿಂದ ಹೊರ ಬರುವುದು ಕಷ್ಟ. ಪಾಲಕರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಮುಖ್ಯವಾಗಿದೆ ಎಂದರು. ಮನೋವೈದ್ಯ ಡಾ. ಆದಿತ್ಯ ಪಾಂಡುರಂಗಿ, ಪ್ರಾಧ್ಯಾಪಕ ಹರ್ಷವರ್ಧನ ಶೀಲವಂತ, ಜೆಎಸ್​ಎಸ್ ಐಟಿಐ ಕಾಲೇಜಿನ ಪ್ರಾಂಶುಪಾಲ ಮಹಾವೀರ ಉಪಾಧ್ಯೆ, ಪಾಲಿಕೆ ಮಾಜಿ ಸದಸ್ಯ ಸಂಜಯ ಕಪಟಕರ, ನಿವೃತ್ತ ನ್ಯಾಯಾಧೀಶ ಪಿ.ಜಿ.ಎಂ. ಪಾಟೀಲ, ಡಾ. ಕವನ ದೇಶಪಾಂಡೆ, ಡಾ. ಗೋಪಿನಾಥ, ಡಾ. ಗೋವಿಂದರೆಡ್ಡಿ ತಮ್ಮ ವೃತ್ತಿ ಅನುಭವ ಹಂಚಿಕೊಂಡರು.

    ಅರುಣ ಶೀಲವಂತ, ಸಿಪಿಐ ನಾಯ್ಕರ, ಸಿಪಿಐ ಮಹಾಂತೇಶ ಬಸಾಪುರ, ಡಾ. ಅರುಣ ಕುಲಕರ್ಣಿ, ಗಿರೀಶ ಮುತ್ಸದ್ಧಿ, ಕೃಷ್ಣ ದೇಶಪಾಂಡೆ, ತುಳಜಪ್ಪ, ಕೆ.ಎಸ್. ಜಯಂತ, ಇತರರು ಇದ್ದರು. ಸಾಹಿತಿ ಮಾರ್ತಾಂಡಪ್ಪ ಕತ್ತಿ ಸ್ವಾಗತಿಸಿದರು. ವಿನಾಯಕ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀಲ ಬಾಗೇವಾಡಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts