ಬಾಗಲಕೋಟೆ: ವಿಧಾನಸಭಾ ಕ್ಷೇತ್ರವಾರು ಪಕ್ಷದ ಕಾರ್ಯಕರ್ತರ ಸಭೆಗಳನ್ನು ನಡೆಸಿ ಪಾದಯಾತ್ರೆ ಆರಂಭಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರು ಮಹಿಳೆಯರನ್ನು ಆಕರ್ಷಿಸುತ್ತಿದ್ದಾರೆ.
ಪಾದಯಾತ್ರೆ ವೇಳೆ ಮಹಿಳೆಯರು ಅರಿಶಿಣ ಕುಂಕುಮ ಕೊಟ್ಟು ಗೌರವಿಸುವ, ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಆಶೀರ್ವದಿಸುತ್ತಿದ್ದಾರೆ. ಸರ್ಕಾರದ ಪಂಚ ಗ್ಯಾರಂಟಿ ಸೌಲಭ್ಯಗಳನ್ನು ಪಡೆಯುತ್ತಿರುವ ಮಹಿಳೆಯರು ಗೆದ್ದು ಬಾ ಮಗಳೆ, ನಾವು ನಿನ್ನೊಂದಿಗೆ ಇದ್ದೇವೆ ಎಂದು ಹೇಳುತ್ತಿದ್ದಾರೆ.
ಜಮಖಂಡಿಯಲ್ಲಿ ಸೋಮವಾರ ಪಾದಯಾತ್ರೆ ವೇಳೆ ವೃದ್ಧೆಯೊಬ್ಬರು ಸಂಯುಕ್ತ ಪಾಟೀಲ ಅವರನ್ನು ಅಪ್ಪಿಕೊಂಡು ಒಳ್ಳೆಯದಾಗಲಿ ಎಂದು ಹರಸಿದರು. ಸಿದ್ದರಾಮಯ್ಯ ಪ್ರತಿ ತಿಂಗಳು ನಮಗೆ ದುಡ್ಡು ಕೊಡುತ್ತಿದ್ದಾರೆ. ಅಕ್ಕಿ ಸಿಗುತ್ತಿದೆ. ಜೀವನ ನಿರ್ವಹಣೆಗೆ ಸಹಕಾರ ಆಗಿದೆ ಎಂದು ಹೇಳಿದರು.
ಪಾದಯಾತ್ರೆ ವೇಳೆ ಹೋಟೆಲ್ನಲ್ಲಿ ಉಪಾಹಾರ ಸೇವಿಸುತ್ತಲೆ ಹೋಟೆಲ್ ಗ್ರಾಹಕರೊಂದಿಗೆ ಸಂವಾದ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದಿರುವ ಯೋಜನೆಗಳನ್ನು ವಿವರಿಸಿದರು. ಐದು ಗ್ಯಾರಂಟಿ ಯೋಜನೆಗಳಿಂದ ಸುಮಾರು ಒಂದು ಕೋಟಿ ಕುಟುಂಬಗಳು ಬಡತನ ರೇಖೆಯಿಂದ ಹೊರಗೆ ಬಂದಿರುವ ಸಂಗತಿಯನ್ನು ಮನವರಿಕೆ ಮಾಡಿದರು.
ಹೋಟೆಲ್ನಲ್ಲಿದ್ದ ಯುವಕರನ್ನು ಕೇಂದ್ರ ಸರ್ಕಾರ ನಿಮಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆಯೇ? ನಿಮ್ಮ ಮನೆಯ ಹಿರಿಯರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮಾ ಆಗಿದೆಯಾ? ಪ್ರಧಾನಿ ನರೇಂದ್ರ ಮೋದಿ ಅವರು ವಚನ ಕೊಟ್ಟಂತೆ ಉದ್ಯೋಗ ಸೃಷ್ಟಿ ಮಾಡಿದ್ದಾರೆಯೇ? ನಿಮ್ಮ ಸಾಲ ಮನ್ನಾ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.
ಇಷ್ಟೆಲ್ಲಾ ಮಾತು ಕೊಟ್ಟು ಪಾಲನೆ ಮಾಡದ ಬಿಜೆಪಿ ಬೇಕಾ? ಕೊಟ್ಟ ಮಾತಿನಂತೆ ನಡೆದುಕೊಂಡಿರುವ ಕಾಂಗ್ರೆಸ್ ಬೇಕಾ? ಎಂದು ಪ್ರಶ್ನೆ ಮಾಡಿದರು.
ದೇಶ ಇಂದು ಸಂದಿಗ್ಧ ಸ್ಥಿತಿಯಲ್ಲಿದೆ. ಯುವಶಕ್ತಿ ಉದ್ಯೋಗ ಇಲ್ಲದೆ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದೆ. ಬಿಜೆಪಿ ಭಾವನೆಗಳ ಮೂಲಕ ಚೆಲ್ಲಾಟ ಆಡಿ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಬದುಕು ಕಟ್ಟಿಕೊಡಲು, ಅಭಿವೃದ್ಧಿ ಆಧಾರಿತ ರಾಜಕಾರಣ ಮಾಡುತ್ತಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕಾಗಿದ ಎಂದು ಮನವರಿಕೆ ಮಾಡಿದರು.
ಪಾದಯಾತ್ರೆ ನಂತರ ಬಂಡಿಗಣಿ ಅನ್ನದಾನೇಶ್ವರ ಮಠದ ಶ್ರೀ ದಾನಯ್ಯ ಸ್ವಾಮಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ನಂತರ ಜಮಖಂಡಿ ತಾಲೂಕಿನ ಹಲವು ಹಳ್ಳಿಗಳಿಗೆ ತೆರಳಿ ಮತಯಾಚನೆ ಮಾಡಿದರು.