ಚಿತ್ರದುರ್ಗ: ಅಪಾರ ಪ್ರತಿಭೆ ಹೊಂದಿರುವ ಮಹಿಳೆಯರು ಸಂಸಾರ, ಸಮಾಜ ಸಮತೋಲನದ ನಡುವೆ ಸಾಧನೆ ಮಾಡುತ್ತಿದ್ದಾರೆ. ಹೀಗಾಗಿ ಬಹುಮುಖ ವ್ಯಕ್ತಿತ್ವ ಉಳ್ಳವರಾಗಿದ್ದಾರೆ ಎಂದು ಜಿಲ್ಲಾ ನ್ಯಾಯಾಧೀಶೆ ಕೆ.ಬಿ.ಗೀತಾ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಬಸವೇಶ್ವರ ವಿದ್ಯಾಸಂಸ್ಥೆ, ರೈನ್ ಟ್ರಸ್ಟ್, ಸ್ವಯಂ ಸೇವಾ ಸಂಸ್ಥೆಯಿಂದ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಆನೇಕ ಶೋಷಣೆಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಇತ್ತೀಚೆಗೆ ಅವರ ವಿರುದ್ಧದ ದೌರ್ಜನ್ಯ ಮತ್ತು ಶೋಷಣೆ ತಗ್ಗಿರುವುದು ಸಂತಸದ ವಿಚಾರ ಎಂದರು.
ಅಪರಾಧಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಡಾ.ನಟರಾಜ್ ಮಾತನಾಡಿ, ಸ್ತ್ರೀಯರು ಸಾಮಾಜಿಕ ಸ್ಥಾನಮಾನ ಭದ್ರ ಪಡಿಸಿಕೊಳ್ಳಬೇಕು. ಕಾನೂನಿನ ಅರಿವಿನ ಜೊತೆಗೆ ತಮ್ಮ ಹಕ್ಕುಗಳ ರಕ್ಷಣೆ ಮಾಡಿಕೊಳ್ಳಬೇಕು. ಅನ್ಯಾಯ ಹಾಗೂ ದೌರ್ಜನ್ಯದ ಸಂದರ್ಭ ಎದುರಾದರೆ, ಧೈರ್ಯವಾಗಿ ಎದುರಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್, ಬಸವೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷೆ ಪ್ರಭಾವತಿ ಶಂಕರಪ್ಪ, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಐ.ಬಿ.ಅಕ್ಷತಾ, ರೈನ್ ಟ್ರಸ್ಟ್ ಅಧ್ಯಕ್ಷ ಕಸವನಹಳ್ಳಿ ರಮೇಶ್, ಪಿ.ಜಿ.ಅನಿತಾ, ಲಕ್ಷ್ಮಿ ಆಚಾರ್ಯ, ಕೋಡೇನಹಟ್ಟಿ ಟಿ.ಸುಮಾ, ಪರಿಸರ ಕಾರ್ಯಕರ್ತ ಪಿ.ವಿ.ಮಲ್ಲಿಕಾರ್ಜುನಪ್ಪ, ಸಾಮಾಜಿಕ ಕಾರ್ಯಕರ್ತರಾದ ಮಾರಗಟ್ಟ ತಿಪ್ಪೇಸ್ವಾಮಿ, ಕಿರಣ್, ಶಂಕರಪ್ಪ, ಎಂ.ಮಂಜುನಾಥ್ ಕಳ್ಳಿಹಟ್ಟಿ ಇತರರಿದ್ದರು.