ಬೆಳಗಾವಿ: ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಹೊಂದಾಣಿಕೆ ಮಾಡಿಕೊಂಡು ಹೊಸ ಸರ್ಕಾರ ರಚನೆ ಮಾಡುವುದು ನಿಶ್ಚಿತ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್ಸಿಪಿ, ಕಾಂಗ್ರೆಸ್, ಶಿವಸೇನೆ ಸೇರಿ ಯಾವಾಗ ಸರ್ಕಾರ ಸ್ಥಾಪಿಸಿದಿರೋ ಆಗಲೇ ಈ ಸರ್ಕಾರ ಬಹಳ ದಿನ ನಡೆಯುವುದಿಲ್ಲ ಎಂದು ನಾವು ತಿಳಿದುಕೊಂಡಿದ್ದೇವು. ತಮ್ಮ ತಮ್ಮಲ್ಲಿಯೇ ಗೊಂದಲ ಮೂಡಿದೆ. ಒಂದು ವಾಹನ ಆರಂಭಿಸುವಾಗ ಪೂರ್ತಿ ಸ್ಟಿಯರಿಂಗ್ ಒಬ್ಬರ ಕಡೆ ಇರಬೇಕು.
ಒಬ್ಬರ ಕಡೆ ಸ್ಟೇರಿಂಗ್, ಒಬ್ಬರ ಕಡೆ ಎಕ್ಸಿಲೇಟರ್, ಒಬ್ಬರ ಕಡೆ ಬ್ರೇಕ್ ಇರುವಾಗ ಅದು ಸುಸೂತ್ರವಾಗಿ ಓಡುವುದಿಲ್ಲ ಎಂದು ನಮಗೆ ಮೊದಲೇ ಅನಿಸಿತ್ತು ಎಂದರು.
ಶಿವಸೇನೆ 50 ವರ್ಷಗಳಿಂದ ಕಾಂಗ್ರೆಸ್ ಮತ್ತು ಎನ್ಸಿಪಿಯನ್ನು ವಿರೋಧಿಸುತ್ತ ಬಂದಿತ್ತು. ಏಕಾಏಕಿ ಅವರ ಜತೆಗೆ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುವುದನ್ನು ಕಾರ್ಯಕರ್ತರು ಒಪ್ಪುವುದಿಲ್ಲ. ಇದರಿಂದ ಅಸಮಾಧಾನ ಗೊಂಡು ಹೊರಗೆ ಬರುತ್ತಿದ್ದಾರೆ. ಎಲ್ಲ ಸಾಧಕ, ಭಾದಕ ವಿಚಾರ ಮಾಡಿಕೊಂಡು ಅವರು ಭೇಟಿಯಾಗ ಬಹುದು. ನಿಶ್ಚಿತವಾಗಿ ಮಹಾರಾಷ್ಟ್ರದಲ್ಲಿ ಒಂದು ಹೊಸ ಸರ್ಕಾರ ಸ್ಥಾಪನೆ ಆಗುತ್ತದೆ ಎಂದರು. ಶಿವಸೇನೆ- ಬಿಜೆಪಿ ಹೊಂದಾಣಿಕೆ ಹೊಸದಲ್ಲ. ಹಳೆಯ ಸಂಬಂಧ. ಏನೋ ಸ್ವಲ್ಪ ಹೊಂದಾಣಿಕೆ ಕೊರತೆಯಿಂದ ದೂರ ಹೋಗಿರಬಹುದು. ಸುಮಾರು 25 ವರ್ಷಗಳಿಂದ ನಮ್ಮ ನಡುವೆ ಸಂಬಂಧವಿದೆ. ತತ್ವ, ಸಿದ್ಧಾಂತಗಳಲ್ಲಿ ನಮ್ಮ ಎರಡೂ ಪಕ್ಷಗಳಲ್ಲಿ ಹೊಂದಾಣಿಕೆ ಯಿದೆ. ಮತ್ತೆ ಅಲ್ಲಿ
ಒಂದಾಗಲಿದ್ದಾರೆ ಎಂದರು.
ಪ್ರತ್ಯೇಕ ರಾಜ್ಯದ ಬಗ್ಗೆ ಸಚಿವ ಉಮೇಶ ಕತ್ತಿ ಹೇಳಿರುವುದು ಅದು ಅವರ ವಯಕ್ತಿಕ ಹೇಳಿಕೆ. ಅದು ನಮ್ಮ ಪಕ್ಷ ಮತ್ತು ಸರ್ಕಾರದ ನಿರ್ಧಾರ ಅಲ್ಲ. ನನಗೆ ಅದರ ಬಗ್ಗೆ ಗೊತ್ತಿಲ್ಲ. ಅವರು ನನಗಿಂತ ಹಿರಿಯರು, ನಾನು 3 ಬಾರಿ ಎಂಎಲ್ಎ ಆಗಿದ್ದೇನೆ, ಆದರೆ ಅವರು 9 ಸಲ ಎಂಎಲ್ಎ ಆಗಿದ್ದಾರೆ ಎಂದು ಪ್ರತಿಕ್ರಿಯಿಸಿದರು.