*ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ಡಿ.ರವಿಶಂಕರ್ ಕಿಡಿ
ಸಾಲಿಗ್ರಾಮ: ಮಳೆ ಹಾನಿ ಪ್ರದೇಶಗಳಿಗೆ ಜನಪ್ರತಿನಿಧಿಗಳು ಭೇಟಿ ನೀಡುವ ಮೂಲಕ ಸಂತ್ರಸ್ತರ ಸಮಸ್ಯೆ ಆಲಿಸಬೇಕು ಎಂದು ಕಾಂಗ್ರೆಸ್ ಮುಖಂಡ ಡಿ.ರವಿಶಂಕರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಭಾರಿ ಮಳೆಗೆ ತಾಲೂಕಿನ ವಿವಿಧೆಡೆ ಅಪಾರ ಹಾನಿಯುಂಟಾಗಿದ್ದು, ಜಲಾವೃತಗೊಂಡ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ತಂದ್ರೆ ಗ್ರಾಮದ ಲೋಕೇಶ್ ಎಂಬುವರ ಮನೆ ಮಳೆಯಿಂದ ಜಲಾವೃತಗೊಂಡ ವೇಳೆ ಅಧಿಕಾರಿಗಳು ಬಂದು ಫೋಟೊ ಮತ್ತು ವರದಿ ತೆಗೆದುಕೊಂಡು ಹೋದರು. ಪರಿಹಾರ ಬರುವ ತನಕ ಅವರು ಜೀವನ ಹೇಗೆ? ಕೂಡಲೇ ಅವರಿಗೆ ಆಶ್ರಯ ಮನೆ ಮತ್ತು ನಷ್ಟಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಕೆ.ಆರ್.ನಗರ ಪಟ್ಟಣ, ಸಾಲಿಗ್ರಾಮ ಪಟ್ಟಣ, ಭೇರ್ಯ, ಮಿರ್ಲೆ, ಚುಂಚನಕಟ್ಟೆ, ಹೆಬ್ಬಾಳು, ಹರದನಹಳ್ಳಿ, ಹನಸೋಗೆ, ತಿಪ್ಪೂರು, ಹೊಸೂರು, ಹಂಪಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಜನರ ಬದುಕು ಹೇಳತೀರದಾಗಿದೆ. ಕೂಡಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಚಿವರನ್ನು ತಾಲೂಕಿಗೆ ಕಳುಹಿಸಿ ಕೊಡುವಂತೆ ಒತ್ತಾಯಿಸಿದರು.
ಸಾಲಿಗ್ರಾಮ ಪಟ್ಟಣದ ಬ್ಲಾಕ್ ಕಾಂಗ್ರೆಸ್ಅಧ್ಯಕ್ಷ ಶಿವಣ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚೆಂದು, ಗ್ರಾಪಂ ಮಾಜಿ ಅಧ್ಯಕ್ಷೆ ಸುಮಾ ಜಗದೀಶ್, ಮುಖಂಡರಾದ ವೀಣಾ ದಿಲೀಪ್, ಲೋಕೇಶ್, ರವಿ, ಧರ್ಮ ಇದ್ದರು.