ಬೇಲೂರು: ಕೆಲ ದಿನಗಳ ಹಿಂದೆ ತಾಲೂಕಿನಾದ್ಯಂತ ಸುರಿದ ಭಾರಿ ಗಾಳಿ ಮಳೆಗೆ ತಾಲೂಕಿನ ಜೆ.ಸೂರಾಪುರ ಗ್ರಾಮದ ಅಂಗವಿಕಲ ಸಿದ್ದೇಶ್ ಅವರ ಮನೆಗೋಡೆ ಸಂಪೂರ್ಣ ಕುಸಿದು ಬಿದ್ದಿದ್ದು, ವಾಸಕ್ಕೆ ಮನೆ ಇಲ್ಲದಂತಾಗಿದೆ.
ತಾಲೂಕಿನ ಇಬ್ಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆ.ಸೂರಾಪುರ ಗ್ರಾಮದ ಅಂಗವಿಕಲ ಸಿದ್ದೇಶ್ ಮನೆ ಕೆಲ ದಿನಗಳ ಹಿಂದೆ ಸುರಿದ ಮಳೆಗೆ ನೆನೆದಿತ್ತು. ಆದರೆ, ಮತ್ತೆ ಎರಡು ದಿನಗಳಿಂದ ಪುನಃ ಬರುತ್ತಿರುವ ಮಳೆಗೆ ಸಂಪೂರ್ಣವಾಗಿ ಗೋಡೆಗಳು ಕುಸಿದು ಬಿದ್ದಿರುವುದರಿಂದ ಅವರಿಗೆ ವಾಸಕ್ಕೆ ಮನೆ ಇಲ್ಲದಂತಾಗಿದೆ. ಇಷ್ಟಾದರೂ ಯಾವುದೇ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ ಮಾತನಾಡಿ, ಹುಟ್ಟು ಅಂಗವಿಕಲರಾಗಿರುವ ಸಿದ್ದೇಶ್, ಜೀವನಕ್ಕೆ ಆಶ್ರಯವಾಗಿದ್ದ ಮನೆ ಕುಸಿದು ಬಿದ್ದಿದೆ. ಇಷ್ಟಾದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸದಿರುವುದು ಬೇಸರದ ಸಂಗತಿ. ಸ್ಥಳೀಯ ಶಾಸಕರಾಗಲಿ, ತಹಸೀಲ್ದಾರ್ರಾಗಲಿ ಸ್ಥಳಕ್ಕೆ ಬಂದು ಸ್ಪಂದಿಸಿಲ್ಲ. ಇಂತಹ ವ್ಯಕ್ತಿಗೆ ಕೂಡಲೇ ಸ್ಪಂದಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಕಚೇರಿ ಮುಂದೆ ರೈತ ಸಂಘದಿಂದ ಪ್ರತಿಭಟಿಸಬೇಕಾಗುತ್ತದೆ ಎಂದರು.