ಖಾನಾಪುರ: ತಾಲೂಕಿನ ಕಣಕುಂಬಿ ಬಳಿ ಬುಧವಾರ ಪಾರವಾಡದಿಂದ ಗೋವಾ ಕಡೆಗೆ ತೆರಳುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಪಟ್ಟಾಗಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಾರವಾಡ ಗ್ರಾಮದ ಗುಲಾಬಿ ಪಾಂಡುರಂಗ ಗಾವಸ್ (65) ಮೃತಪಟ್ಟ ಮಹಿಳೆ.
ವಿಶ್ವಧಾರಾ ವಿಠ್ಠಲ ಪಾರ್ವಾಡಕರ್ (50), ರೇಷ್ಮಾ ಮಹಾದೇವ ಗಾವಸ್ (40) ಮತ್ತು ಚಾಲಕ ಮಹಾದೇವ ಅಪ್ಪಾ ಗಾವಸ್ (42) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾದ್ದು, ವಿಶ್ವಧಾರಾ ಅವರ ಸ್ಥಿತಿ ಚಿಂತಾಜನಕವಾಗಿದೆ. ಕಾರಿನಲ್ಲಿದ್ದ ಅನ್ವೇಶಾ ಎಂಬುವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಪಾರವಾಡದ ಗ್ರಾಮ ದೇವತೆಗಳಾದ ಶ್ರೀ ಸಾತೇರಿ ಮತ್ತು ಕೇಳ್ಬಾಯಿ ದೇವಿ ವಾರ್ಷಿಕ ಉತ್ಸವ ಹಿನ್ನೆಲೆಯಲ್ಲಿ ಮಂಗಳವಾರ ಆಗಮಿಸಿದ್ದ ಅವರು ಬುಧವಾರ ಕಾರಿನಲ್ಲಿ ಗೋವಾಕ್ಕೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ತಿರುವಿನಲ್ಲಿ ಮರಕ್ಕೆ ಡಿಕ್ಕಿ ಹೊಡೆದಿದೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.