ಸಿದ್ದಾಪುರ: ಕರೊನಾ ಸಂಡೇ ಲಾಕ್ಡೌನ್ ನಿಮಿತ್ತ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಎಲ್ಲ ಅಂಗಡಿಗಳು ಮುಚ್ಚಿದ್ದವು. ಬೆಂಗಳೂರು ಹಾಗೂ ಮತ್ತಿತರ ಕಡೆಗಳಲ್ಲಿ ವಿವಿಧ ಉದ್ಯೋಗದಲ್ಲಿದ್ದ ಎರಡು ಸಾವಿರಕ್ಕೂ ಹೆಚ್ಚು ಜನರು ಊರಿಗೆ ಬಂದಿದ್ದರಿಂದ ಗ್ರಾಮೀಣ ಭಾಗದ ಜನರಲ್ಲಿ ಕರೊನಾ ಮಹಾಮಾರಿಯ ಆತಂಕ ಉಂಟಾಗಿದೆ. ಇದರಿಂದ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಅವಶ್ಯಕ ವಸ್ತುಗಳ ಖರೀದಿಗಷ್ಟೇ ಭಾನುವಾರ ನಾಗರಿಕರು ಹೊರಗೆ ಬಂದಿದ್ದರು.
ಅಂಗಡಿ- ಮುಂಗಟ್ಟುಗಳು ಬಂದ್
ಮುಂಡಗೋಡ: ತಾಲೂಕಿನಲ್ಲಿ ಭಾನುವಾರ ಎಲ್ಲ ಅಂಗಡಿ- ಮುಂಗಟ್ಟುಗಳು ಬಂದ್ ಆಗಿದ್ದವು. ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪಟ್ಟಣದ ಜನರು ಬೆಳಗ್ಗೆಯಿಂದ ಹೊರಗೆ ಬರದೇ ಮನೆಯಲ್ಲಿಯೇ ಇದ್ದರು. ವಾಹನ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪಟ್ಟಣದ ಬಸ್ ನಿಲ್ದಾಣ, ಶಿವಾಜಿ ಸರ್ಕಲ್, ಬಸವನ ಬೀದಿ, ಬನ್ನಿಕಟ್ಟಿ ಸೇರಿ ಹುಬ್ಬಳ್ಳಿ- ಶಿರಸಿ, ಬಂಕಾಪುರ- ಯಲ್ಲಾಪುರ ರಸ್ತೆಗಳಲ್ಲಿ ಜನ ಸಂಚಾರ ಇರಲಿಲ್ಲ. ಹಾಲು, ತರಕಾರಿ, ಚಿಕನ್, ಮಟನ್ ಅಂಗಡಿಗಳ ಮಾಲೀಕರು ವ್ಯಾಪಾರ ನಡೆಸಿದರು. ಔಷಧ ಅಂಗಡಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಎಂದಿನಂತೆ ಸೇವೆ ಲಭ್ಯವಿತ್ತು.