ನಿಪ್ಪಾಣಿ, ಬೆಳಗಾವಿ: ಮತಕ್ಷೇತ್ರ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಕೋಡಣಿ ಗ್ರಾಮದಲ್ಲಿ ಇಲ್ಲಿಯವರೆಗೆ 19 ಕೋಟಿ ರೂ. ವರೆಗೆ ಅಧಿಕ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ತಾಲೂಕಿನ ಕೋಡಣಿ ಗ್ರಾಮದಲ್ಲಿ ಕೋಡಣಿ ರಸ್ತೆಯಿಂದ ದತ್ತಾ ಖವರೆ ಮನೆಯವರೆಗಿನ 1 ಕೋಟಿ ರೂ. ವೆಚ್ಚದ ಕಿರು ಸೇತುವೆ ಸಹಿತ ಒಂದು ಕಿಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೆಲಕಾಲ ಕರೊನಾದಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದವು. ಸದ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಕೋಡಣಿ ಗ್ರಾಮದ 6 ದೇವಸ್ಥಾನಗಳಿಗೆ ಮುಜರಾಯಿ ಇಲಾಖೆಯಿಂದ 39 ಲಕ್ಷ ರೂ. ಅನುದಾನ ಕಲ್ಪಿಸಿ ಜೀರ್ಣೋದ್ಧಾರಕ್ಕೆ ಸಹಕರಿಸಲಾಗಿದೆ ಎಂದರು. ಜಿಪಂ ಮಾಜಿ ಸದಸ್ಯ ಸಿದ್ದು ನರಾಟೆ ಮಾತನಾಡಿ, ಜೊಲ್ಲೆ ಅವರು ಶಾಸಕಿಯಾದ ಬಳಿಕ ಕ್ಷೇತ್ರ ಸಮಗ್ರ ಅಭಿವೃದ್ಧಿ ಕಾಣುತ್ತಿದೆ. ರೈತರ ಬಗ್ಗೆ ಅವರಿಗಿರುವ ಕಾಳಜಿ ಅಪಾರ ಎಂದರು.
ರಾಜು ಕಾನಡೆ ಮಾತನಾಡಿ, ಗ್ರಾಮದಿಂದ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವುದು ಬಹಳ ಕಷ್ಟಕರವಾಗಿತ್ತು. ಆದರೆ, ಸಚಿವೆ ಜೊಲ್ಲೆ ಅವರು ರಸ್ತೆ ಸುಧಾರಣೆ ಮಾಡಿಸಿದ ನಂತರ ರೈತರಿಗೆ ಅನುಕೂಲವಾಗಿದೆ ಎಂದರು.
ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಮಲಗೊಂಡ ಪಾಟೀಲ, ಚಂಪಾಬಾಯಿ ಖವರೆ ಮಾತನಾಡಿದರು. ಹಾಲಶುಗರ್ಸ್ನ ಸಂಚಾಲಕ ರಾಮಗೊಂಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಲಲಿತಾ ತೋರಣೆ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಸ್.ಎಸ್.ಢವಣೆ, ಆನಂದ ಸಂಕಪಾಳ, ಪ್ರಕಾಶ ಶಿಂಧೆ, ರವಿ ಖೋತ ಇತರರಿದ್ದರು.