ನಂಜನಗೂಡು: ವೈಯಕ್ತಿಕ ಸಂಕಷ್ಟವನ್ನು ಬದಿಗೊತ್ತಿ ಮಕ್ಕಳನ್ನು ಶಿಕ್ಷಿತರನ್ನಾಗಿಸಬೇಕು ಎಂದು ಥಿಯೋರಾಮ್ ಇಂಡಿಯಾ ಸಂಸ್ಥೆ ಮುಖ್ಯಸ್ಥ ಭಾಸ್ಕರ್ ಪಾಲಕರಿಗೆ ಸಲಹೆ ನೀಡಿದರು.
ತಾಲೂಕಿನ ಕಳಲೆ ಗ್ರಾಮದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.
ಮೂಲ ಸೌಕರ್ಯಗಳ ಕೊರತೆ ನಡುವೆಯೂ ಗ್ರಾಮಾಂತರ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರಿದ್ದಾರೆ. ಸಮಾಜದ ಬಹುತೇಕ ಸಾಧಕರು ಸಾಧನೆಗೆ ವೈಯಕ್ತಿಕ ಸಂಕಷ್ಟ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ ಇಂತಹ ಸಾಧಕರು ಎಲ್ಲರಿಗೂ ಆದರ್ಶ ಎಂದರು.
ಎಂಟು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 65 ಲಕ್ಷ ರೂ. ವೆಚ್ಚದಲ್ಲಿ ಕಳಲೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕೊಠಡಿ, ಅಡುಗೆ ಮನೆ ಹಾಗೂ ಹೆಣ್ಣು ಮಕ್ಕಳಿಗೆ ಶೌಚಗೃಹ ನಿರ್ಮಿಸಿಕೊಟ್ಟ ಆಶಾ ಭಾಸ್ಕರ್ ಮತ್ತು ಭಾಸ್ಕರ್ ಕಳಲೆ ದಂಪತಿಯನ್ನು ಶ್ರೀ ಲಕ್ಷ್ಮೀಕಾಂತಸ್ವಾಮಿ ದೇವಾಲಯದ ಪಾರುಪತ್ತೆಗಾರ ಜಯರಾಂ ನೇತೃತ್ವದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ತಬಲಾದಲ್ಲಿ ವಿಶೇಷ ಸಾಧನೆ ತೋರಿರುವ ರೋಹಿತ್ ಕಳಲೆ ಅವರನ್ನು ಅಭಿನಂದಿಸಲಾಯಿತು. ಸರ್ಕಾರಿ ಪ್ರಾಥಮಿಕ ಮತ್ತು ಫ್ರೌಢಶಾಲೆ ಮುಖ್ಯ ಶಿಕ್ಷಕರಾದ ನಂಜುಂಡಸ್ವಾಮಿ, ಕಾರಯ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.