ತಿ.ನರಸೀಪುರ: ಗ್ರಾಮೀಣ ಭಾಗದ ಶಾಲಾ ಮಕ್ಕಳಲ್ಲಿ ನಿರೀಕ್ಷೆಗೂ ಮೀರಿದ ಪ್ರತಿಭೆ ಅಡಗಿದ್ದು ಅದನ್ನು ಗುರುತಿಸಿ ಹೊರತರುವ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ಶಾಸಕ ಎಂ.ಅಶ್ವಿನ್ಕುಮಾರ್ ಹೇಳಿದರು.
ತಾಲೂಕಿನ ಆಲಗೂಡು ಗ್ರಾಮದ ಸಮೀಪ ಎನ್ಕೆಎಫ್ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಹಿರಿಯ ಪ್ರಾಥಮಿಕ ಶಾಲೆಗಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಎರಡರಲ್ಲೂ ಇರುತ್ತಾರೆ. ಆದರೆ ನಗರ ಪ್ರದೇಶದ ಮಕ್ಕಳು ಕೇವಲ ವಿದ್ಯಾಭ್ಯಾಸ ಮಾಡುವುದರಲ್ಲಿ ಮಾತ್ರ ಪ್ರತಿಭಾವಂತರಾಗಿರುತ್ತಾರೆ. ಗ್ರಾಮೀಣ ಭಾಗದ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ದೊರಕದ ಕಾರಣ ಅವರಲ್ಲಿರುವ ಸುಪ್ತ ಪ್ರತಿಭೆ ಹೊರಹೊಮ್ಮಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಕೆಲಸ ಮಾಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ ಮಾತನಾಡಿ, ಕ್ರೀಡೆ ಮತ್ತು ಕಲೆ ಮಕ್ಕಳಲ್ಲಿನ ಶೈಕ್ಷಣಿಕ ಅರ್ಹತೆಯನ್ನು ಮತ್ತಷ್ಟು ಉಜ್ವಲಗೊಳಿಸುತ್ತವೆ. ಹಾಗಾಗಿ ಮಕ್ಕಳಲ್ಲಿನ ಕಲೆಯನ್ನು ಪಾಲಕರು ಸಕಾರಾತ್ಮಕವಾಗಿ ಸ್ವೀಕರಿಸಿ ಪೋಷಣೆ ಮಾಡಬೇಕು ಎಂದು ಸಲಹೆ ನೀಡಿದರು.
ಶಾಲೆಯ ಸಂಸ್ಥಾಪಕ ಎನ್.ಕೆ.ಫರೀದ್ ಮಾತನಾಡಿ, ದೇಶದಲ್ಲಿ ಹಲವು ಧರ್ಮಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿವೆ. ಶಿಕ್ಷಣ ಸಂಸ್ಥೆಗಳ ಮೂಲ ಉದ್ದೇಶ ದೇಶದ ಅಭಿವೃದ್ಧಿಯಾಗಬೇಕು. ಆಗ ಮಾತ್ರವೇ ಸಮಾಜದ ಎಲ್ಲ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತು ದೇಶದ ಅಭಿವೃದ್ಧಿ ಆಗಲಿದೆ ಎಂದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಯೀದ್ ಅಹ್ಮದ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ಮೂರ್ತಿ, ಬಿಸಿಯೂಟ ಯೋಜನಾ ನಿರ್ದೇಶಕ ಮದ್ದಾನಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಡಿ.ಮಾದಪ್ಪ, ಪ್ರಧಾನ ಕಾರ್ಯದರ್ಶಿ ಕುಪ್ಯ ಪುಟ್ಟಸ್ವಾಮಿ, ಬಿಆರ್ಸಿ ನಾಗೇಶ್, ಸಿಆರ್ಪಿ ನವೀನ್, ಶಿಕ್ಷಕ ಕೇಶವ್, ರಿಯಾಜ್ ಅಹಮದ್, ಶಾಲೆಯ ಮುಖ್ಯ ಶಿಕ್ಷಕಿ ಹೇಮಾ, ಸಹ ಶಿಕ್ಷಕಿಯರಾದ ಕೆ.ಅಶ್ವಿನಿ, ಬಿ.ಗೀತಾ, ಬಿ.ಅನಿತಾ, ಎನ್.ರಶ್ಮಿ, ನೂರ್ಹಾಜಿರಾ ಬೇಗಂ, ಮಧುಶ್ರೀ, ರೇಖಾ, ಬಿ.ಶೈಲಾ, ಎಸ್.ಶಿಲ್ಪಶ್ರೀ, ಕೆ.ಸ್ವರ್ಣಲತಾ, ಸಿ.ಆಶಾ ಸೇರಿದಂತೆ ವಿವಿಧ ಕ್ಲಸ್ಟರ್ಗಳ ಸಿಆರ್ಪಿಗಳು ಭಾಗವಹಿಸಿದ್ದರು.