ಧಾರವಾಡ: ಭೂ ಸುಧಾರಣೆ ಕಾಯ್ದೆಯಲ್ಲಿನ 79ಎ,ಬಿ,ಸಿ ಹಾಗೂ 80ನೇ ಕಾಲಂಗಳನ್ನು ರದ್ದುಗೊಳಿಸಿ ಭೂ ಖರೀದಿ ಮಿತಿ ಹೆಚ್ಚಿಸಲು ಕಾಯ್ದೆಗೆ ತಿದ್ದುಪಡಿ ತಂದಿರುವ ಸರ್ಕಾರದ ನಿರ್ಧಾರ ಖಂಡಿಸಿ ಭಾರತೀಯ ಕಿಸಾನ್ ಸಂಘದ ವತಿಯಿಂದ ನಗರದ ತಹಸೀಲ್ದಾರ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ದೇಶದ ಬಂಡವಾಳಶಾಹಿಗಳು ಹಾಗೂ ಕಾಪೋರೇಟ್ ಹಿತಾಸಕ್ತಿಗೆ ಮಣಿದು ಕೇಂದ್ರ ಸರ್ಕಾರ ರೈತರ ಜಮೀನನ್ನು ಕಬಳಿಸಲು ಹೊರಟಿದೆ. ಈ ನಿರ್ಧಾರದಿಂದ ಕೃಷಿ ಕ್ಷೇತ್ರ ವಿನಾಶದ ಅಂಚಿನಲ್ಲಿ ಸಾಗುವುದರಲ್ಲಿ ಸಂದೇಹವೇ ಇಲ್ಲ. ರೈತರು ಹಾಗೂ ಕೃಷಿ ಆಧಾರಿತ ಉದ್ಯೋಗ ನಂಬಿದ ಗ್ರಾಮೀಣ ಜನರ ಬದುಕು ಬೀದಿಗೆ ಬರಲಿದೆ. ಹೀಗಾಗಿ ಸರ್ಕಾರ ಕೂಡಲೆ ಈ ನಿರ್ಧಾರ ಕೈ ಬಿಡಬೇಕು ಎಂದು ಆಗ್ರಹಿಸಿದರು. ಕೃಷಿಕ ಇತ್ತೀಚಿನ ದಿನಗಳಲ್ಲಿ ಸಂಕಷ್ಟ ಎದುರಿಸುತ್ತಿದ್ದಾನೆ. ಇಂತಹದರಲ್ಲಿ ಅವರ ನೆರವಿಗೆ ಬರುವ ಬದಲು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಆರೋಪಿಸಿ, ತಹಸೀಲ್ದಾರ್ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗೆ ಮನವಿಪತ್ರ ರವಾನಿಸಿದರು. ಸಂಘದ ಅಧ್ಯಕ್ಷ ವಿವೇಕ ಮೋರೆ, ಕಾರ್ಯದರ್ಶಿ ಡಿ.ಸಿ. ರಂಗರಡ್ಡಿ, ಪುಟ್ಟಸ್ವಾಮೀಜಿ, ಮಂಜು ಗೌರಿ, ಗುರು ನಾಗಣ್ಣ, ಇತರರಿದ್ದರು.