More

    ಬೆಳಕಿನ ಹಬ್ಬಕ್ಕೆ ಗ್ರಹಣದ ಕರಿನೆರಳು

    ಸಾಗರ: ಮಂಗಳವಾರ ಸೂರ್ಯ ಗ್ರಹಣ ಇರುವುದರಿಂದ ಕೆಲವರು ದೀಪಾವಳಿ ಆಚರಣೆಗೆ ಹಿಂದೇಟು ಹಾಕುತ್ತಿದ್ದಾರೆ. ಗ್ರಹಣದಿಂದಾಗಿ ದೀಪಾವಳಿ ಒಳ್ಳೆಯ ಫಲ ನೀಡುವುದೋ? ಇಲ್ಲವೋ? ಎನ್ನುವ ಜಿಜ್ಞಾಸೆಯಲ್ಲಿದ್ದಾರೆ. ದೀಪಾವಳಿ ಪೂಜೆಗಿಂತ ಈ ಬಾರಿ ಗ್ರಹಣದ ಶಾಂತಿಗೆ ಬೇಡಿಕೆ ಹೆಚ್ಚಿದೆ. ಜನ ಕರಿ ಎಳ್ಳು, ಎಳ್ಳೆಣ್ಣೆ, ನವಗ್ರಹದ ಧಾನ್ಯ, ಮಣ್ಣಿನ ದೀಪಗಳನ್ನು ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ.
    ಗ್ರಹಣದ ಬಗ್ಗೆ ವೈಜ್ಞಾನಿಕವಾಗಿ ಎಷ್ಟೇ ವಿವರಣೆ ನೀಡಿದರೂ, ಹಬ್ಬದ ಎದುರಿನಲ್ಲಿ ಕಾಣಿಸುತ್ತಿರುವ ಗ್ರಹಣಕ್ಕೆ ಸಾಗರ ತಾಲೂಕಿನಲ್ಲಿ ಅನೇಕರು ದೇವಾಲಯಗಳಿಗೆ ತೆರಳಿ ಶಾಂತಿ ಮಾಡಿಸುವತ್ತ ಗಮನ ಹರಿಸಿದ್ದಾರೆ.
    ಬೆಳಕಿನ ಹಬ್ಬದ ಸಮಯದಲ್ಲಿ ತಾಲೂಕಿನ ರೈತಾಪಿ ವರ್ಗ ಸಂಕಷ್ಟದಲ್ಲಿದೆ. ಕೊಳೆ ರೋಗ, ಎಲೆಚುಕ್ಕೆ ರೋಗದ ಕಾರಣ ಅಡಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಅಕಾಲಿಕ ಮಳೆಗೆ ತರಕಾರಿ, ಭತ್ತ, ಜೋಳ ನೀರಿನಲ್ಲಿ ಕೊಚ್ಚಿದೆ. ಕೆಲವು ಕಡೆ ಭತ್ತಕ್ಕೆ ರೋಗ ಕಾಣಿಸಿಕೊಂಡಿದ್ದು, ಫಸಲು ಕೈಗೆ ಸಿಕ್ಕಿಲ್ಲ. ಹೀಗಾಗಿ ಅನ್ನದಾತ ದೀಪಾವಳಿಯ ಖರೀದಿಗೆ ಹಿಮ್ಮುಖನಾಗಿದ್ದಾನೆ.
    ಹಬ್ಬದ ಸಂದರ್ಭದಲ್ಲಿ ಎಣ್ಣೆ, ಕಡಲೆ ಹಿಟ್ಟು, ಕಡಲೆಕಾಯಿ, ಅಕ್ಕಿ, ಬೇಳೆ, ತುಪ್ಪ, ಬೆಲ್ಲ ಇಂತಹವುಗಳನ್ನು ಅಧಿಕ ಪ್ರಮಾಣದಲ್ಲಿ ಖರೀದಿಸುತ್ತಾರೆ. ಆದರೆ ಈ ವರ್ಷ ಖರೀದಿ ಪ್ರಮಾಣ ಐದು, ಹತ್ತು ಕೆ.ಜಿ.ಯಿಂದ ಒಂದು ಅಥವಾ ಎರಡು ಕೆ.ಜಿ.ಗೆ ಇಳಿದಿದೆ.
    ಗೋವಿನ ಸಿಂಗಾರಕ್ಕೆ ರೈತಾಪಿ ಜನ ವಿವಿಧ ಬಣ್ಣಗಳ ಹಗ್ಗ ಕಣ್ಣಿಗೊಟ್ಟ ಖರೀದಿ ಮಾಡುತ್ತಿರುವುದು ಮಾರುಕಟ್ಟೆಯಲ್ಲಿ ಕಂಡು ಬಂತು. ಕೊಟ್ಟಿಗೆಗೂ ಸಿಂಗಾರ ಮಾಡಲಿದ್ದು, ಅದಕ್ಕೆ ಸಂಬಂಧಿಸಿದಂತ ವಸ್ತುಗಳ ಖರೀದಿ ಜೋರಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts