ಬೇಲೂರು: ತಾಲೂಕಿನ ಅನುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನಲ್ಲಿ ಒಂಟಿ ಮಖ್ನಾ ಆನೆ ಪಡಿತರ ಅಕ್ಕಿ ತಿಂದಿರುವುದರಿಂದ ಸುತ್ತಮುತ್ತಲಿನ ಜನರು ಬೆಚ್ಚಿಬಿದ್ದಿದ್ದಾರೆ.
ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿತ್ಯ ನೂರಾರು ಜನರು ಕೆಲಸ ಕಾರ್ಯಗಳಿಗೆ ಬಂದು ಹೋಗುತ್ತಾರೆ. ಆದರೆ ಕಾಡಾನೆ ಎರಡನೇ ಬಾರಿಗೆ ಗೋದಾಮಿಗೆ ನುಗ್ಗಿ ಅಕ್ಕಿ ತಿಂದಿರುವ ವಿಷಯ ತಿಳಿದು ಆತಂಕಗೊಂಡಿದ್ದಾರೆ.
ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಕಾಡಾನೆಗಳ ದಾಳಿಯಿಂದ ಈ ಭಾಗದಲ್ಲಿ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಿದರೆ, ಕಾರ್ಮಿಕರು, ಸಾರ್ವಜನಿಕರು ಜೀವ ಭಯದಲ್ಲೆ ಓಡಾಡುವಂತಾಗಿದೆ. ಆಹಾರ ಅರಸಿ ಕಾಡಿನಿಂದ ಹಿಂಡು ಹಿಂಡಾಗಿ ಕಾಫಿ ತೋಟ ಹಾಗೂ ಗದ್ದೆಗಳತ್ತ ನುಗ್ಗುತ್ತಿರುವ ಕಾಡಾನೆಗಳಿಂದಾಗಿ ರೈತರ ಬೆಳೆ ನಾಶವಾಗುತ್ತಿದೆ. ಗ್ರಾಮದಲ್ಲಿನ ಕೆಲ ಮನೆಗಳ ಕಿಟಿಕಿ ಬಾಗಿಲು ಮುರಿದು, ರಾಜಾರೋಷವಾಗಿ ಅಂಗಡಿ-ಮುಂಗಟ್ಟುಗಳು, ಮನೆಗಳ ಗೋದಾಮುಗಳಿಗೆ ನುಗ್ಗಿ ಭತ್ತ, ಅಕ್ಕಿ ತಿಂದು ದಾಂಧಲೆ ನಡೆಸುತ್ತಿವೆ. ಜತೆಗೆ ಮನೆಗಳ ಅಕ್ಕಪಕ್ಕ, ಹಿಂಭಾಗದಲ್ಲೆ ಬೀಡು ಬಿಡುತ್ತಿರುವುದರಿಂದ ಮಲೆನಾಡು ಭಾಗದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದು, ಕಾಡಾನೆಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ಕಾಫಿ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಚೇತನ್ಕುಮಾರ್ ಮಾತನಾಡಿ, ಸರ್ಕಾರ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಟಾಸ್ಕ್ಫೋರ್ಸ್ ರಚಿಸಿ ಕೈತೊಳೆದು ಕೊಂಡಿದೆ. ಇದರಿಂದ ಯಾವುದೆ ಪ್ರಯೋಜನವಾಗುತ್ತಿಲ್ಲ. ದಿನದಿಂದ ದಿನಕ್ಕೆ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದೆ. ಕಾಫಿ ಬೆಳೆಗಾರರು, ಕಾರ್ಮಿಕರು ಜೀವಭಯದಲ್ಲಿದ್ದಾರೆ. ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರ ಕಾಡಾನೆಗಳನ್ನು ಶಾಶ್ವತವಾಗಿ ಸ್ಥಳಾಂತರಿಸಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.