ಹುಬ್ಬಳ್ಳಿ: ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಅಫ್ರೋಜ್ ಮಂಚನಕೊಪ್ಪ ಹಾಗೂ ಬಿಜೆಪಿಯ ಮೆಹಬೂಬಿ ಬೆಂಗಳೂರಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಾರವಾರ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ ಅನ್ಯ ಪಕ್ಷದವರನ್ನು ಕಾಂಗ್ರೆಸ್ಗೆ ಸ್ವಾಗತಿಸಿದರು.
ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಬಂದಿರುವುದರಿಂದ ನಮಗೆ ಮತ್ತಷ್ಟು ಬಲ ಬಂದಿದೆ. ಚುನಾವಣೆ ಘೊಷಣೆಯಾಗಿರುವುದರಿಂದ ಯಾರೂ ಮೈ ಮರೆಯದೆ ಕೆಲಸ ಮಾಡಬೇಕು. ತೋರಿಕೆಗಾಗಿ ಮಾಡದೆ, ಪಕ್ಷದ ಗೆಲುವಿಗೆ ದುಡಿಯಿರಿ. ಮುಂದೆ ಅವರವರ ಶ್ರಮಕ್ಕೆ ತಕ್ಕಂತೆ ಸ್ಥಾನಮಾನ ಸಿಗಲಿದೆ ಎಂದು ಅಬ್ಬಯ್ಯ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಮೇಟಿ ಕಾಂಗ್ರೆಸ್ ಸೇರಿದರು. ಪಾಲಿಕೆ ವಿರೋಧ ಪಕ್ಷದ ನಾಯಕ ದೋರಾಜ್ ಮಣಿಕುಂಟ್ಲ, ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ, ಪಾಲಿಕೆ ಸದಸ್ಯ ಇಲಿಯಾಸ್ ಮನಿಯಾರ್, ಮಾಜಿ ಸದಸ್ಯ ಬಶೀರ್ ಗುಡಮಾಲ್, ಡಿ.ಎಂ. ದೊಡ್ಡಮನಿ, ಇನಾಯತ್ ಖಾನ್ ಪಠಾಣ, ಮದನ ಕುಲಕರ್ಣಿ, ಮೆಹಮೂದ್ ಕೋಳೂರು, ಪ್ರಸನ್ನ ಮೀರಜಕರ, ಅಕ್ಕಮ್ಮ ಕಂಬಳಿ, ಚೇತನಾ ಲಿಂಗದಾಳ, ಇತರರು ಇದ್ದರು.