ದಾವಣಗೆರೆ:ಕೈಯಿಂದ ನೀರೆತ್ತುವ ಯಂತ್ರ, ಸೌರ ದೋಣಿ, ಹಸಿ ಹಾಗೂ ಒಣ ಕಸ ಬೇರ್ಪಡಿಸುವ ಯಂತ್ರ, ಭೂಕಂಪನ ಎಚ್ಚರಿಕೆಯ ಮಾಪನ, ಮೇಲ್ಮೈ ಒತ್ತಡ, ಔಷಧೀಯ ಸಸ್ಯಗಳು, ಗಾಳಿಯ ಒತ್ತಡ, ಭೂಮಿಯ ಗುರುತ್ವಾಕರ್ಷಣೆ, ಜಲವಿದ್ಯುತ್ ಅಣೆಕಟ್ಟು ಮಾದರಿಗಳು, ದ್ಯುತಿ ಸಂಶ್ಲೇಷಣೆ ಕ್ರಿಯೆ, ಹನಿ ನೀರಾವರಿ ಪದ್ದತಿ, ರಸ್ತೆ ಸುರಕ್ಷತಾ ವ್ಯವಸ್ಥೆ..
ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆವಿಷ್ಕಾರ್ ಮತ್ತು ತಂತ್ರ-ವಿಜ್ಞಾನ ಹಾಗೂ ರೋಬೋಟಿಕ್ ವಸ್ತು ಪ್ರದರ್ಶನದಲ್ಲಿ ಮಕ್ಕಳು ಪ್ರದರ್ಶಿಸಿದ ಮಾದರಿಗಳಿವು.
ಪಿ.ಎಸ್.ಎಸ್.ಇ.ಎಂ.ಆರ್. ಮತ್ತು ಎಸ್.ಎಸ್.ಎನ್.ಪಿ. ಶಾಲೆ ಸಹಯೋಗದಲ್ಲಿ ನೂರಕ್ಕೂ ಹೆಚ್ಚು ವಿಧದ ಮಾದರಿಗಳೊಂದಿಗೆ ಅವುಗಳ ವಿವರಣೆ ನೀಡುತ್ತಿದ್ದ ಮಕ್ಕಳು ಗಮನ ಸೆಳೆದರು.
ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಧಾರುಕೇಶ ಮಾತನಾಡಿ, ವಿಜ್ಞಾನ ಕ್ಷೇತ್ರಕ್ಕೆ ಅನೇಕ ವಿಜ್ಞಾನಿಗಳು ನೀಡಿದ ಕೊಡುಗೆಗಳನ್ನು ಸ್ಮರಿಸಿ ಅವರಂತೆ ಸಾಧಕರಾಗಲು ಪ್ರಯತ್ನಿಸಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಲು ಶಿಸ್ತು-ಭಕ್ತಿಯಿಂದ ಶಿಕ್ಷಣ ಪಡೆಯುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಶಾಲೆಯ ಪ್ರಾಚಾರ್ಯೆ ಬಿ.ಎಸ್.ವನಿತಾ, ಶಾಲೆಯ ಮುಖ್ಯಸ್ಥ ಮಂಜುನಾಥ್ ರಂಗರಾಜು, ಶಿಕ್ಷಣ ಸಂಯೋಜಕಿ ಆರ್. ಚೇತನಾ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ್ಗೌಡ, ಎ.ಸಿ.ಸವಿತಾ, ಎನ್.ಆರ್. ನಳಿನಿ, ಕೃಷಿ ಮಾರುಕಟ್ಟೆ ಅಧಿಕಾರಿ ಗಿರೀಶ್ನಾಯ್ಕ, ಎಸ್ಎಸ್ಎಲ್ಪಿ ಶಾಲೆಯ ಪ್ರಾಚಾರ್ಯೆ ಪ್ರೀತಿ ಸಿಂಗ್, ಪಿಎಸ್ಎಸ್ಇಎಂ.ಆರ್ ಶಾಲೆಯ ಪ್ರಾಚಾರ್ಯ ಬಿ.ಎನ್. ಕಮಲ್, ರಮೇಶ್ಬಾಬು, ಎಸ್. ಮಂಜುಳಾ, ಸಿ.ಋತಿಕಾ, ಸಿ.ಮಂಜಪ್ಪ, ಸವಿತಾ ರಮೇಶ್ ಇತರರಿದ್ದರು. ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು.