ಹುಬ್ಬಳ್ಳಿ: ಕರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೊಸೂರು ದುರ್ಗಾದೇವಿ ಜಾತ್ರೆ ರದ್ದುಪಡಿಸಿ, ದೇವಸ್ಥಾನ ಬಂದ್ ಮಾಡಿದ್ದರೂ ಮಂಗಳವಾರ ಭಕ್ತರು ದೇವರ ದರ್ಶನಕ್ಕೆ ಮುಗಿಬಿದ್ದಿದ್ದರು.
ಪ್ರತಿ ವರ್ಷ ಆಷಾಢ ಮಂಗಳವಾರ ದೇವಿ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿತ್ತು. ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರುತ್ತಿತ್ತು. ಆದರೆ, ಕರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಈ ಬಾರಿ ದೇವಸ್ಥಾನ ಬಂದ್ ಮಾಡಲಾಗಿತ್ತು. ಆದರೂ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು.
ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಭಕ್ತರನ್ನು ತಡೆದು ವಾಪಸ್ ಕಳುಹಿಸಿದರು. ರಸ್ತೆಯಲ್ಲೇ ನಿಂತು ದೇವಿಗೆ ಕೈಮುಗಿದು ವಾಪಸಾದರು.
ವಾಗ್ವಾದ: ದೇವಸ್ಥಾನದ ಒಳಗೆ ಹೋಗಿ ದರ್ಶನ ಪಡೆಯಲು ಯತ್ನಿಸಿದ್ದ ಕೇಶ್ವಾಪುರ ಠಾಣೆಯ ಕಾನ್ಸ್ಟೇಬಲ್ ಹಾಗೂ ಉಪನಗರ ಠಾಣೆ ಎಎಸ್ಐ ನಡುವೆ ವಾಗ್ವಾದ ನಡೆಯಿತು. ಪ್ರವೇಶ ನೀಡಲು ಸಾಧ್ಯವೇ ಇಲ್ಲ ಎಂದು ಹೇಳಿದಾಗ ಕಾನ್ಸ್ಟೇಬಲ್, ಹೊರಗಿನಿಂದಲೇ ಕೈ ಮುಗಿದು ತೆರಳಿದರು.