ಗೋಕರ್ಣ: ಕಳೆದ ನಾಲ್ಕು ದಿನಗಳ ಹಿಂದೆ ಇಲ್ಲಿನ ತದಡಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ಗಳು ಸೋಮವಾರ ವಾಪಸಾಗಿವೆ. ಬಂದರಿನಲ್ಲಿ ತೆರೆಯಲಾದ ಆರೋಗ್ಯ ಇಲಾಖೆಯ ಕೌಂಟರ್ನಲ್ಲಿ ಆರೋಗ್ಯಾಧಿಕಾರಿ ಡಾ.ಜಗದೀಶ ನಾಯ್ಕ ನೇತೃತ್ವದಲ್ಲಿ ಮೀನುಗಾರಿಕೆ ಮುಗಿಸಿ ಬಂದ ಎಲ್ಲ 86 ಮೀನುಗಾರರನ್ನು ಆರೋಗ್ಯ ಕಾರ್ಯಕರ್ತರು ಪರೀಕ್ಷಿಸಿದರು. ಮೀನುಗಾರಿಕೆ ಪುನರಾರಂಭದಿಂದ ಹೊರ ಜಿಲ್ಲೆಯ ಮೀನುಗಾರರು ಬರುತ್ತಾರೆ ಎಂಬ ಆತಂಕ ಸ್ಥಳೀಯವಾಗಿ ಕೇಳಿ ಬಂದಿತ್ತು. ಆದರೆ ತದಡಿ ಬಂದರಿನಿಂದ ಹೋದವರು ಮಾತ್ರ ವಾಪಸಾಗಿರುವುದರಿಂದ ಜನರಲ್ಲಿದ್ದ ಆತಂಕ ದೂರಾದಂತಾಗಿದೆ.
ಸ್ಥಗಿತ ಸಾಧ್ಯತೆ: ನಾಲ್ಕೈದು ದಿನ ಮಾತ್ರ ನಡೆದ ಮೀನುಗಾರಿಕೆಯಿಂದ ಬೋಟ್ನ ಡೀಸೆಲ್ ವೆಚ್ಚ ಕೂಡ ಹುಟ್ಟದೇ ಮೀನುಗಾರರು ಖಾಲಿ ಬಲೆ ಹೊತ್ತು ಬಂದಿದ್ದಾರೆ. ಇದರಿಂದಾಗಿ ಮೇ 31ರ ತನಕ ಮೀನುಗಾರಿಕೆಗೆ ಅವಕಾಶ ಇದ್ದರೂ ಮಂಗಳವಾರದಿಂದ ಯಾವುದೇ ಬೋಟ್ ಮೀನುಗಾರಿಕೆಗೆ ತೆರಳುವ ಸಾಧ್ಯತೆ ಇಲ್ಲವಾಗಿದೆ.ಇವೆಲ್ಲವುಗಳಿಂದ ತದಡಿ ಬಂದರಿನಲ್ಲಿ ಈ ವರ್ಷದ ಮೀನುಗಾರಿಕೆ ಮೂರು ವಾರ ಮೊದಲೆ ಸ್ಥಗಿತವಾಗಲಿದೆ. ತಪಾಸಣೆ ವೇಳೆ ಕರಾವಳಿ ಕಾವಲು ಪಡೆಯ ಸಿಪಿಐ ಮಾರುತಿ ನಾಯಕ, ಪಿಎಸ್ಐ ನವೀನ ನಾಯ್ಕ ಮುಂತಾದವರಿದ್ದರು.
ಮೀನುಗಾರಿಕೆಗೆ ಹೋಗಿ ಬಂದವರೆಲ್ಲ ಆರೋಗ್ಯವಾಗಿದ್ದಾರೆ. ಮೀನುಗಾರಿಕೆ ತೀರಾ ಕ್ಷೀಣವಾಗಿರುವ ಹಿನ್ನೆಲೆಯಲ್ಲಿ ಬಂದರಿನಲ್ಲಿ ಈ ವರ್ಷದ ಮೀನುಗಾರಿಕೆ ಕೊನೆಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ವಸಂತ ಹೆಗಡೆ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ